ಶ್ರೀನಗರ : ಭಯೋತ್ಪಾದನೆ ವಿಷಯದಲ್ಲಿ ಮೊದಲಿನಿಂದಲೂ ಕಪಟ ನಾಟಕ ಆಡುತ್ತಿದ್ದ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಪಹಲ್ಗಾಮ್ ನರಮೇಧಕ್ಕೆ ಪ್ರತಿಯಾಗಿ ಕಳೆದ 4 ದಿನಗಳಿಂದ ಭಾರತ ನಡೆಸಿದ ದಾಳಿಗೆ ಕಂಗೆಟ್ಟು ಕದನ ವಿರಾಮಕ್ಕೆ ಅಂಗಲಾಚಿದ್ದ ಪರಮ ಪಾಪಿ ಪಾಕಿಸ್ತಾನ, ಶನಿವಾರ ಕದನ ವಿರಾಮ ಘೋಷಣೆಯಾದ ಬಳಿಕ ಮತ್ತೆ ಭಾರತದ ಮೇಲೆ ದಾಳಿ ಮಾಡಿ ಕಪಟ ನಾಟಕ ಮೆರೆದಿದೆ
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಶನಿವಾರ ಸಂಜೆ 5.00 ಗಂಟೆಯಿಂದ ಜಾರಿಗೆ ಬರುವಂತೆ ಕದನ ವಿರಾಮ ಘೋಷಿಸಿದ್ದವು. ಆದರೆ ಶನಿವಾರ ರಾತ್ರಿಯಾಗುತ್ತಲೇ ಕಾಶ್ಮೀರ, ಪಂಜಾಬ್, ಗುಜರಾತ್, ರಾಜಸ್ಥಾನ- ಹೀಗೆ 4 ರಾಜ್ಯಗಳಲ್ಲಿ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿ ನೂರಾರು ಡ್ರೋನ್ ಹಾಗೂ ಶೆಲ್ ದಾಳಿ ನಡೆಸಿದೆ. ಗಮನಾರ್ಹವೆಂದರೆ ಶ್ರೀಕ್ಷೇತ್ರ ವೈಷ್ಟೋದೇವಿ ಮೇಲೂ ಡ್ರೋನ್ ದಾಳಿ ಯತ್ನ ನಡೆದಿದೆ. ಹೀಗಾಗಿ ಪಾಕಿಸ್ತಾನದ ಕದನವಿರಾಮ ಘೋಷಣೆ ಕೇವಲ ಕಪಟ ನಾಟಕ ಎಂದು ಸಾಬೀತಾಗಿದೆ
ಶನಿವಾರ ಸಂಜೆ ದಿಢೀರ್ ವಿದ್ಯಮಾನವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಭಾರತ-ಪಾಕಿಸ್ತಾನಗಳು ಕದನವಿರಾಮಕ್ಕೆ ಒಪ್ಪಿಕೊಂಡಿವೆ’ ಎಂದು ಪ್ರಕಟಿಸಿದರು. ಬಳಿಕ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಕದನವಿರಾಮ ಘೋಷಣೆ ಖಚಿತಪಡಿಸಿದರು. ಈ ನಡುವೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ, ಭಾರತ ಮತ್ತು ಪಾಕಿಸ್ತಾನ ನಡುವೆ ಶನಿವಾರ 5.00 ಗಂಟೆಯಿಂದ ಜಾರಿಗೆ ಬರುವಂತೆ ಕದನವಿರಾಮಕ್ಕೆ ಒಪ್ಪಿಕೊಳ್ಳಲಾಗಿದೆ’ ಎಂದು ಪ್ರಕಟಿಸಿದರು. ಬಳಿಕ ಕದನವಿರಾಮ ಘೋಷಣೆ ಬಗ್ಗೆ ವಿಶ್ವವ್ಯಾಪಿ ಸ್ವಾಗತ ವ್ಯಕ್ತವಾಯಿತು.
ಆದರೆ ವಾಸ್ತವವಾಗಿ ಐಎಂಎಫ್ನಿಂದ 85 ಸಾವಿರ ಕೋಟಿ ರು. ಸಾಲ ಪಡೆಯಲು ಪಾಕಿಸ್ತಾನ ತಾನೇ ಅಮೆರಿಕಕ್ಕೆ ಅಂಗಲಾಚಿ ಕದನ ವಿರಾಮಕ್ಕೆ ಒಪ್ಪಿತ್ತು ಎಂದು ನಂತರ ತಿಳಿದುಬಂದಿತ್ತು.

