ಹೊಸದಿಲ್ಲಿ: ನಮಗೆ ಗಡಿಯೊಂದೇ ಇದ್ದರೂ, ‘ಆಪರೇಷನ್ ಸಿಂದೂರ್’ ವೇಳೆ ಮೂವರು ಶತ್ರು ರಾಷ್ಟ್ರಗಳನ್ನು ಎದುರಿಸಬೇಕಾಯಿತು ಎಂದು ಭಾರತದ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್. ಸಿಂಗ್ ಹೇಳಿದ್ದಾರೆ. ಅವರು ಇತ್ತೀಚೆಗಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕುರಿತು ಮಾತನಾಡುತ್ತಿದ್ದರು.
ಪಾಕಿಸ್ತಾನದ ಶೇ.81ರಷ್ಟು ಶಸ್ತ್ರಾಸ್ತ್ರಗಳು ಚೀನಾ ಮೂಲದ್ದಾಗಿವೆ. ತನ್ನ ಮಿಲಿಟರಿ ತಂತ್ರಜ್ಞಾನಗಳ ಪರೀಕ್ಷೆ ನಡೆಸಲು ಚೀನಾ ಪಾಕಿಸ್ತಾನವನ್ನು ಪ್ರಯೋಗ ಶಾಲೆಯಂತೆ ಬಳಸುತ್ತಿದೆ. ಆಪರೇಷನ್ ಸಿಂದೂರ್ ವೇಳೆ ಟರ್ಕಿಯೂ ಪಾಕ್ ಸೇನೆಗೆ ತನ್ನ ನೆರವು ನೀಡಿ ಪ್ರಮುಖ ಪಾತ್ರ ವಹಿಸಿದೆ. ನಮಗೆ ಗಡಿಯೊಂದೇ ಇದ್ದರೂ, ಮೂವರು ಶತ್ರುಗಳನ್ನೆದುರಿಸ ಬೇಕಾಯಿತು. ಪಾಕಿಸ್ತಾನ ನಮ್ಮ ಮುಂದೆ ನಿಂತಿದೆ ಎಂದು ಅವರು ವಿವರಿಸಿದ್ದಾರೆ.
ಸಿಂದೂರ್ ಕಲಿಸಿದ ಪಾಠ
ಆಪರೇಷನ್ ಸಿಂದೂರ್ನಲ್ಲಿ ಕೆಲವು ಪಾಠಗಳಿವೆ. ನಮ್ಮ ನಾಯಕತ್ವದ ಕಾರ್ಯತಾಂತ್ರಿಕ ಸಂದೇಶ ಸ್ಪಷ್ಟವಾಗಿತ್ತು. ಕಳೆದ ಕೆಲವು ವರ್ಷಗಳಂತೆ ನಾವು ನೋವನ್ನು ನುಂಗಿಕೊಳ್ಳುವ ಪ್ರಶ್ನೆಯಿಲ್ಲ. ತಂತ್ರಜ್ಞಾನ ಮತ್ತು ಮಾನವ ಬುದ್ಧಿಮತ್ತೆ ಬಳಸಿ ಸಂಗ್ರಹಿಸಿದ ಮಾಹಿತಿ ಆಧಾರದಲ್ಲಿ ಗುರಿ ಆಯ್ಕೆ ಮತ್ತು ದಾಳಿ ಯೋಜನೆ ರೂಪಿಸಲಾಗಿತ್ತು. ಒಟ್ಟು 21 ಗುರಿಗಳನ್ನು ಗುರುತಿಸಲಾಗಿದ್ದು, ಅಂತಿಮ ಕ್ಷಣಗಳಲ್ಲಿ 9 ಗುರಿಗಳ ಮೇಲೆ ದಾಳಿ ನಡೆಸಲು ನಿರ್ಧರಿಸಿದ್ದೆವು ಎಂದು ತಿಳಿಸಿದ್ದಾರೆ.

