ಹೊಸದಿಲ್ಲಿ: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ ತೂಗುದೀಪ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಜೆ. ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ನ್ಯಾಯಪೀಠ, ಅವರನ್ನೊಳಗೊಂಡ ಹೈಕೋರ್ಟ್ ತನ್ನ ವಿವೇಚನೆಯನ್ನು ಚಲಾಯಿಸಿದ ರೀತಿ ತಮಗೆ ತೃಪ್ತಿ ತಂದಿಲ್ಲ ಎಂದು ಹೇಳಿದೆ.
ಜಾಮೀನು ಆದೇಶದಲ್ಲಿ ಸುಪ್ರೀಂ ಕೋರ್ಟ್ ಏಕೆ ಮಧ್ಯಪ್ರವೇಶಿಸಬಾರದು ಎಂಬುದಕ್ಕೆ ಉತ್ತಮ ಕಾರಣಗಳನ್ನು ನೀಡುವಂತೆ ಪೀಠ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಕೇಳಿತು. ನ್ಯಾಯಮೂರ್ತಿ ಪರ್ದಿವಾಲಾ, ನಿರ್ದಿಷ್ಟವಾಗಿ ಆರೋಪಿಗಳನ್ನು ಜಾಮೀನಿನ ಮೇಲೆ ಹೇಗೆ ಬಿಡುಗಡೆ ಮಾಡುವುದು ಎಂಬುದರ ಮೇಲೆ ಹೈಕೋರ್ಟ್ ದೃಷ್ಟಿಕೋನ ಸರಿಯಿಲ್ಲ ಎಂದರು.
ಕರ್ನಾಟಕವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಸಿದ್ದಾರ್ಥ್ ಲೂಥಾ ಅವರಿಗೆ, ಜುಲೈ 22 ರಂದು ಮುಂದಿನ ವಿಚಾರಣೆಯೊಳಗೆ ಆರೋಪಿಗಳ ಪೂರ್ವಾಪರದ ಬಗ್ಗೆ ಮಾಹಿತಿ ನೀಡುವಂತೆ ಕೋರ್ಟ್ ಆದೇಶಿಸಿತು.
ಸುಪ್ರೀಂ ಕೋರ್ಟ್ ಈ ಹಿಂದೆ ಜನವರಿ 24ರಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ ಜಾಮೀನು ರದ್ದುಗೊಳಿಸಲು ನಿರಾಕರಿಸಿತ್ತು.

