ಬೈಂದೂರು : ಬೈಂದೂರು ಕ್ಷೇತ್ರದ ವಿದ್ಯಾವಂತರಿಗೆ ವಿದೇಶಿ ನೆಲದಲ್ಲಿ ಉದ್ಯೋಗ ನೀಡುವ ಗುರಿಯೊಂದಿಗೆ ಕೇಂದ್ರ ಸರಕಾರದ ಎನ್.ಎಸ್.ಡಿ ಸಿ ಯೋಜನೆಯಡಿಯಲ್ಲಿ ಅಜಿನೋರ್ ಪ್ರಾಯೋಜಕತ್ವದಲ್ಲಿ ದೇಶದಲ್ಲೇ ದ್ವಿತೀಯ ಭಾರಿಗೆ ಬೈಂದೂರಿನಲ್ಲಿ ನಾಳೆ ಬೃಹತ್ ವಿದೇಶಿ ಉದ್ಯೋಗ ಮೇಳ ಆಯೋಜಿಸಲಾಗಿದೆ
ಸಮೃದ್ದ ಬೈಂದೂರಿನ ಪರಿಕಲ್ಪನೆಯಡಿಯಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ವಿದೇಶದಲ್ಲಿ ಉದ್ಯೋಗದ ಅವಕಾಶ ಒದಗಿಸುವ ಸಲುವಾಗಿ ಆಗಸ್ಟ್ 31ರಂದು ಶನಿವಾರ ಬೈಂದೂರಿನ ಜೆ.ಎನ್.ಆರ್. ಆಡಿಟೋರಿಯಂನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಈಗಾಗಲೇ ಸುಮಾರು 7 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದರು
ಅವರು ನಿನ್ನೆ ಗುರುವಾರ ಉಪ್ಪುಂದ ಶಾಸಕರ ಕಚೇರಿ ಕಾರ್ಯಕರ್ತದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿದೇಶಿ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಿದರು
ಅಂತಾರಾಷ್ಟ್ರೀಯ ಉದ್ಯೋಗ ಮೇಳದಲ್ಲಿ ಜಪಾನ್, ಮಲೇಶಿಯಾ, ಜರ್ಮನಿ, ಕೋವೇಶಿಯ, ಗಲ್ಫ್ ದೇಶಗಳ ಕಂಪೆನಿಗಳು ಭಾಗವಹಿಸಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ವಸತಿ ವ್ಯವಸ್ಥೆ ಊಟ ಉಪಾಹಾರ, ವೀಸಾ ಹಾಗೂ ಉಚಿತ ವಿಮಾನ ಟಿಕೆಟ್ ಕೇಂದ್ರ ಸರಕಾರದಿಂದ ದೊರೆಯಲಿದೆ ಎಂದರು.
ಬೈಂದೂರು ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಉಪ್ಪುಂದ ಮಾತನಾಡಿ, ಶಾಸಕರ ನೇತೃತ್ವದಲ್ಲಿ ವಿದ್ಯೆ, ಉದ್ಯೋಗ, ಆರೋಗ್ಯದ ದೃಷ್ಟಿ ಇಟ್ಟುಕೊಂಡು ಸಮೃದ್ಧ ಬೈಂದೂರು ಯೋಜನೆ ರೂಪಿಸಲಾಗಿದೆ. ಬೈಂದೂರಿನ ವಿದ್ಯಾವಂತರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೇಂದ್ರದಿಂದ ಈ ಮೇಳ ನಡೆಯಲಿದ್ದು ಎಲ್ಲ ರೀತಿಯ ವ್ಯವಸ್ಥೆ ಒದಗಿಸಲು ಸಿದ್ಧತೆ ನಡೆಸಲಾಗಿದೆ ಎಂದರು. ಉದ್ಯಮಿ ವೆಂಕಟೇಶ ಕಿಣಿ ಬೈಂದೂರು, ಅಜಿನೋರಾ ಸಂಸ್ಥೆಯ ಸಹಾಯಕ ನಿರ್ದೇಶಕ ಅಗಸ್ಟಿನ್ ಉಪಸ್ಥಿತರಿದ್ದರು. ಶೋಧನ ಕುಮಾರ್ ಸ್ವಾಗತಿಸಿದರು ಗಣೇಶ ಗಾಣಿಗ ವಂದಿಸಿದರು.

