Home » ಸಮುದ್ರದ ಅಲೆಗೆ ಸಿಲುಕಿ ಸಾವು
 

ಸಮುದ್ರದ ಅಲೆಗೆ ಸಿಲುಕಿ ಸಾವು

by Kundapur Xpress
Spread the love

ಭಟ್ಕಳ: ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾದ ನಸ್ತಾರ್ ಬೀಚ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ದುರಂತವೊಂದರಲ್ಲಿ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರು ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿದ್ದಾರೆ.

ಮೃತರನ್ನು ಕಾನ್ಪುರ ನಿವಾಸಿಗಳಾದ ಅಫ್ರೋಜ್ (34) ಮತ್ತು ರಿಜ್ವಾನ್ (28) ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಬುಧವಾರ ಸಂಜೆ ಸುಮಾರು 4 ಗಂಟೆಯ ಹೊತ್ತಿಗೆ ಏಳು ಜನರ ಗುಂಪು ವಿಹಾರಕ್ಕಾಗಿ ಕಡಲತೀರಕ್ಕೆ ತೆರಳಿತ್ತು. ಈ ಪೈಕಿ ಮೂವರು ದಡದಲ್ಲಿ ಕುಳಿತಿದ್ದರೆ, ಅಫ್ರೋಜ್ ಮತ್ತು ರಿಜ್ವಾನ್ ಸೇರಿದಂತೆ ನಾಲ್ವರು ಸಮುದ್ರದ ನೋಟ ವೀಕ್ಷಿಸಲು ಹತ್ತಿರದ ಕಲ್ಲಿನ ಬೆಟ್ಟವನ್ನೇರಿದ್ದರು. ಆ ಸಮಯದಲ್ಲಿ ಸಂಭವಿಸಿದ ಆಕಸ್ಮಿಕವೇ ಈ ದುರಂತಕ್ಕೆ ಕಾರಣವಾಗಿದೆ.

ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಎದ್ದ ಅಲೆಗಳ ಆರ್ಭಟಕ್ಕೆ ಬಂಡೆಯ ಮೇಲಿದ್ದ ಇಬ್ಬರು ಯುವಕರು ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ. ಅಲೆಗಳ ಸೆಳೆತ ತೀವ್ರವಾಗಿದ್ದರಿಂದ ಅವರು ಕ್ಷಣಾರ್ಧದಲ್ಲಿ ಸಮುದ್ರದ ಪಾಲಾಗಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಸಾಮಾಜಿಕ ಕಾರ್ಯಕರ್ತ ಸೌದ್ ಗ್ವಾಯಿ ಅವರು ಸಯಾನ್ ಮತ್ತು ಶಾಜಾಬ್ ಎಂಬುವವರೊಂದಿಗೆ ಸೇರಿ, ಪ್ರಾಣದ ಹಂಗು ತೊರೆದು ಸಮುದ್ರಕ್ಕೆ ಧುಮುಕಿ ಯುವಕರನ್ನು ರಕ್ಷಿಸಲು ಸಾಹಸ ಪ್ರದರ್ಶಿಸಿದರು. ಆದರೆ, ಅಲೆಗಳ ಅಬ್ಬರ ಹೆಚ್ಚಿದ್ದ ಕಾರಣ ಅವರು ಪೀಡಿತರನ್ನು ತಲುಪುವಷ್ಟರಲ್ಲಿ ದುರಂತ ಸಂಭವಿಸಿತ್ತು. ನಂತರ ರಕ್ಷಣಾ ತಂಡವು ಇಬ್ಬರ ಮೃತದೇಹಗಳನ್ನು ಹರಸಾಹಸಪಟ್ಟು ದಡಕ್ಕೆ ತಂದಿದ್ದಾರೆ.

ಸ್ಥಳಕ್ಕೆ ಭಟ್ಕಳ ಡಿವೈಎಸ್ಪಿ ಗಿರೀಶ್, ಉಪನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೆಂಕಟೇಶ್ ಹಾಗೂ ಕರಾವಳಿ ಭದ್ರತಾ ಪಡೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Related Articles

error: Content is protected !!