ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಕರೆ ಹಾಗೂ ಈ ಬಗ್ಗೆ ಸಂಪೂರ್ಣ ಸಹಕಾರ ನೀಡಲು ಬದ್ಧ ಎಂದ ಶಾಸಕರು
ಬೈಂದೂರು : ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆಯವರು ಬೈಂದೂರು ಕ್ಷೇತ್ರದ ಹರ್ಕುರು ಗ್ರಾಮದ ನಾರ್ಕಳಿ ಕೊರಗ ಸಮುದಾಯದವರೊಂದಿಗೆ ದಿನಾಂಕ: 17-02-2026 ರಂದು ರಾತ್ರಿ ಗ್ರಾಮ ವಾಸ್ತವ್ಯ ಕೈಗೊಂಡು ಕೊರಗ ಬಂಧುಗಳೊಂದಿಗೆ ಸಂವಾದ ನಡೆಸಿ ಗ್ರಾಮದಲ್ಲಿನ ಕೊರಗ ಸಮಾಜದ ಸಾಮಾಜಿಕ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು ಹಾಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು ಹಾಗೂ ಕೊರಗ ಸಮುದಾಯವು ಸಮಾಜದ ಅತ್ಯಂತ ಮೃದು ಹಾಗೂ ನಿರ್ಲಕ್ಷಿತ ಸಮಾಜವಾಗಿದೆ ಎಂಬ ಭಾವನೆ ಇದೆ. ಆದರೆ ಈ ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ನಿಂತು ಸಮುದಾಯದ ಎಲ್ಲರೂ ಸುಶಿಕ್ಷಿತರಾಗುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಮುತ್ತೈದೆಯರಿಗೆ ಬಾಗಿನ ಸಮರ್ಪಣೆ :
ಕೊರಗ ಸಮುದಾಯದ ಸ್ಥಳೀಯ ಮುತ್ತೈದೆಯರಿಗೆ ಬಾಗಿನ ನೀಡುವ ಕಾರ್ಯಕ್ರಮದೊಂದಿಗೆ ಗ್ರಾಮ ವಾಸ್ತವ್ಯಕ್ಕೆ ಶಾಸಕರು ಚಾಲನೆ ನೀಡಿದರು.
ಸಹ ಭೋಜನ ಹಾಗೂ ವಾಸ್ತವ್ಯ :ಕೊರಗ ಬಂದುಗಳೊಂದಿಗೆ ಸಂವಾದ ನಡೆಸಿದ ನಂತರ ಸಹ ಭೋಜನ ಕೈಗೊಂಡು ರಾತ್ರಿ ಸಮಯ ಹರ್ಕುರು ಗ್ರಾಮದ ನಾರ್ಕಳಿ ಕೊರಗ ಸಮುದಾಯದ ಸುರೇಂದ್ರ ಇವರ ಮನೆಯಲ್ಲಿ ಶಾಸಕರು ಇತರರೊಂದಿಗೆ ವಾಸ್ತವ್ಯ ಹೂಡಿದರು.
ಶಾಸಕರೊಂದಿಗೆ ಗ್ರಾಮ ವಾಸ್ತವ್ಯ ಹಾಗೂ ಸಂವಾದದಲ್ಲಿ ಕೊರಗ ಸಮುದಾಯದ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಕಾಳವರ್ಕರ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.


