Home » ಅಪಾರ್ಟ್‌ಮೆಂಟ್ ನಲ್ಲಿ ಗಾಂಜಾ ಮಾರಾಟ : 11ಮಂದಿ ಆರೋಪಿ ವಶಕ್ಕೆ
 

ಅಪಾರ್ಟ್‌ಮೆಂಟ್ ನಲ್ಲಿ ಗಾಂಜಾ ಮಾರಾಟ : 11ಮಂದಿ ಆರೋಪಿ ವಶಕ್ಕೆ

by Kundapur Xpress
Spread the love

ಮಂಗಳೂರು: ಅಪಾರ್ಟ್‌ಮೆಂಟ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಸುಮಾರು 12 ಕೆಜಿ 264 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಗಳಾದ್ದ ಆದ್ಯತ್ ಶ್ರೀಕಾಂತ್, ಮುಹಮ್ಮದ್ ಆಫ್ರಿನ್, ಮುಹಮ್ಮದ್ ಸ್ಮಾನಿದ್, ನಿಬಿನ್ ಟಿ ಕುರಿಯನ್, ಮುಹಮ್ಮದ್ ಕೆ ಕೆ, ಮುಹಮ್ಮದ್ ಹನನ್, ಮುಹಮ್ಮದ್ ಶಮಿಲ್, ಅರುಣ್ ಥಾಮಸ್, ಮುಹಮ್ಮದ್ ನಿಹಾಲ್ ಸಿ, ಮುಹಮ್ಮದ್ ಜಸೀಲ್ ವಿ ಮತ್ತು ಸಿದಾನ್ ಪಿ ಎಂದು ಗುರುತಿಸಲಾಗಿದೆ.

ದಕ್ಷಿಣ ಪೊಲೀಸ್ ಠಾಣೆಯ ಅಪರಾಧ ಪತ್ತೆ ದಳದ ಸಿಬ್ಬಂದಿ, ಮುಖ್ಯ ಪೊಲೀಸ್ ಕಾನ್‌ಸ್ಟೆಬಲ್ ಪುಟ್ಟರಾಮ್ ಸಿ.ಎಚ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಮಲ್ಲಿಕ್ ಜಾನ್ ಅವರು ಕರ್ತವ್ಯದಲ್ಲಿದ್ದಾಗ, ಕೇರಳದ ವಿದ್ಯಾರ್ಥಿಗಳ ಗುಂಪೊಂದು – ಆದ್ಯತ್ ಶ್ರೀಕಾಂತ್, ಮುಹಮ್ಮದ್ ಆಫ್ರಿನ್, ಮುಹಮ್ಮದ್ ಸ್ಮಾನಿದ್ ಮತ್ತು ಇತರರು – ನಿಷೇಧಿತ ಮಾದಕ ದ್ರವ್ಯ ಗಾಂಜಾವನ್ನು ವಾಣಿಜ್ಯ ಪ್ರಮಾಣದಲ್ಲಿ ಖರೀದಿಸಿ ಅತ್ತಾವರದ ಕಪ್ರಿಗುಡ್ಡೆ ಮಸೀದಿ ಬಳಿಯ ಕಿಂಗ್ ಕೋರ್ಟ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ ಜಿ 1 ರಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿದ್ದು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಈ ಮಾಹಿತಿಯ ಆಧಾರದ ಮೇಲೆ, ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪಿಎಸ್ಐ ಶೀತಲ್ ಅಲಗೂರ್ ಮತ್ತು ತಂಡವು ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ, 11ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳೆಲ್ಲರೂ ಮಂಗಳೂರಿನ ಕಾಲೇಜೊಂದರಲ್ಲಿ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಗಳಾಗಿದ್ದು ದಾಳಿಯ ಸಮಯದಲ್ಲಿ, ಪೊಲೀಸರು 7 ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿದ ಸುಮಾರು 12 ಕೆಜಿ 264 ಗ್ರಾಂ ಗಾಂಜಾ,ಜೊತೆಗೆ 2,000 ರೂ. ಮೌಲ್ಯದ ಎರಡು ಡಿಜಿಟಲ್ ತೂಕದ ಯಂತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡರು. ಒಟ್ಟಾರೆಯಾಗಿ, ಆರೋಪಿಗಳಿಂದ 3,52,280 ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗುರುರಾಜ್, ಪಿಎಸ್‌ಐ ಶೀತಲ್ ಅಲಗೂರ್ ಮತ್ತು ಪಿಎಸ್‌ಐ ಮಾರುತಿ ಪಿ ಅವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯ ನೆರವಿನೊಂದಿಗೆ ಈ ಕಾರ್ಯಾಚರಣೆ ನಡೆದಿದೆ.

 

Related Articles

error: Content is protected !!