ಕುಂದಾಪುರ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರತಿಭಾ ಪ್ರದರ್ಶನ ‘ಸಂಭ್ರಮ’ದ ಉದ್ಘಾಟನೆ ಕಾಲೇಜಿನ ಬಿ.ಎಂ.ಎಸ್. ಕ್ರೀಡಾಂಗಣದ ತೆರೆದ ವೇದಿಕೆಯಲ್ಲಿ ನಡೆಯಿತು.
ಕಲಾ ಚಿಗುರು ತಂಡದ ಸಂಸ್ಥಾಪಕ ಶ್ರೀ ಚೇತನ್ ನೈಲಾಡಿ ಪ್ರತಿಭಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಇಂತಹ ಪ್ರತಿಭಾ ಪ್ರದರ್ಶನ ವಿದ್ಯಾರ್ಥಿಗಳ ಭವಿಷ್ಯದ ಕಲಾ ಬದುಕಿಗೆ ಒಳ್ಳೆಯ ವೇದಿಕೆ. ಈ ಮೌಲ್ಯಪೂರ್ಣ ವೇದಿಕೆಯನ್ನು ವಿದ್ಯಾರ್ಥಿಗಳು ಚೆನ್ನಾಗಿ ಬಳಸಿಕೊಳ್ಳಿ ಎಂದರು. ಇದೇ ಸಂದರ್ಭ ಅವರು ಕುಂದಗನ್ನಡ ಭಾಷೆಯ ಅನನ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅವರು ಪಂಚಮುಖಿ ಶಿಕ್ಷಣದಡಿಯಲ್ಲಿ ಮುನ್ನಡೆಯುತ್ತಿರುವ ನಮ್ಮ ಸಂಸ್ಥೆಯಲ್ಲಿ ಸಾಂಸ್ಕೃತಿಕ ವಿಷಯಗಳಿಗೆ ವಿಶೇಷ ಮನ್ನಣೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ತೀರ್ಪುಗಾರರಾದ ಶ್ರೀ ವೆಂಕಟರಮಣ ಪದವಿ-ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀ ನಾಗೇಂದ್ರ ಕುಮಾರ್ ಬಂಕೇಶ್ವರ, ಸುಜ್ಞಾನ ಪದವಿ-ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀ ಪ್ರಮಥ್ ಶೆಟ್ಟಿ ಹಾಗೂ ಬೈಂದೂರು ಸರಕಾರಿ ಪದವಿ-ಪೂರ್ವ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಶಶಿಕಲಾ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಹಾಗೂ ಆಡಳಿತ ನಿಕಾಯಕರಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಸ್ವಾಗತಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ಸುಧೀರ್ ಕುಮಾರ್ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ಸಂಯೋಜಕಿ ಹಾಗೂ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ದೀಪಿಕಾ ಜಿ. ವಂದಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಪೃಥ್ವಿಶ್ರೀ ಜಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಪ್ರಾರ್ಥಿಸಿದರು.

