ಶ್ರೀನಗರ : ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭರ್ಜರಿ ಕಾರ್ಯಾಚರಣೆ ಮುಂದುವರೆಸಿರುವ ಭಾರತೀಯ ಸೇನಾ ಪಡೆಗಳು ಶುಕ್ರವಾರ ಪುಲ್ವಾಮದಲ್ಲಿ ಅಡಗಿ ಕುಳಿತಿದ್ದ ಮೂವರು ಜೈಷ್ ಎ ಮೊಹಮ್ಮದ್ ಉಗ್ರ ರನ್ನು ಹೊಡೆದುರುಳಿಸಿವೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಅವಂತಿಪೋರಾದ ನಾಡರ್ ಟ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದ್ದವು. ಡ್ರೋನ್ ಗಳ ಮೂಲಕ ಉಗ್ರರ ಚಲನವಲದ ಮೇಲೆ ಕಣ್ಣಾವಲು ಇಡಲಾಗಿತ್ತು.
ಈ ಸಂದರ್ಭದಲ್ಲಿ ಉಗ್ರರು ಅಡಗಿದ್ದ ಪ್ರದೇಶದ ಸುತ್ತ ಭದ್ರತಾ ಸಿಬ್ಬಂದಿ ಸುತ್ತುವರೆದು, ಶರಣಾಗುವಂತೆ ಉಗ್ರರಿಗೆ ಸೂಚಿಸಿದ್ದರು. ಆದರೆ ಆದರೆ ಉಗ್ರರು ಶರಣಾಗಲು ಒಪ್ಪದೇ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಗಂಟೆಗಳ ಕಾಲ ಎರಡೂ ಕಡೆ ಪರಸ್ಪರ ಗುಂಡಿನ ಚಕಮಕಿ ನಡೆದು, ಮೂವರು ಉಗ್ರರು ಹತರಾಗಿದ್ದಾರೆ.ಹತ್ಯೆಯಾದ ಭಯೋತ್ಪಾದಕರನ್ನು ಜೈಶ್ ಸಂಘಟನೆಗೆ ಸೇರಿದ ಆಸಿಫ್ ಅಹ್ಮದ್ ಶೇಖ್, ಅಮೀರ್ ನಾಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಉಗ್ರರ ಬಳಿ ಇದ್ದ ಎಕೆ ರೈಫಲ್, ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ.

