ಭೋಪಾಲ್ : ಪ್ರಸ್ತುತ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಅವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೇಳಾಪಟ್ಟಿಯನ್ನೇ ಕೊಂಚ ಬದಲಿಸಿದ್ದಾರೆ.
ಸೋಮವಾರದಿಂದ ಮಧ್ಯಪ್ರದೇಶದ ಭೋಪಾಲ್ನ ರಾಷ್ಟ್ರೀಯ ಮಾನವ ಸಂಗ್ರಹಾಲಯದಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ ಆರಂಭವಾಗಲಿದೆ. ಇದರಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ರಾಜಭವನದಿಂದ ಬೆಳಗ್ಗೆ 9:45ಕ್ಕೆ ಹೊರಡುವುದು ನಿಗದಿಯಾಗಿತ್ತು. ಆದರೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಗಳನ್ನು ತಲುಪಲು ಅನುಕೂಲವಾಗಲಿ ಎಂಬ ಕಾರಣಕ್ಕೆ 15 ನಿಮಿಷ ತಡವಾಗಿ, ಅಂದರೆ 10 ಗಂಟೆಗೆ ಹೊರಡಲು ನಿರ್ಧರಿಸಿದ್ದಾರೆ. ಪ್ರಧಾನಿಯವರ ಈ ನಿರ್ಧಾರವನ್ನು ಸಿಎಂ ಮೋಹನ್ ಯಾದವ್ ಶ್ಲಾಘಿಸಿದ್ದು ಮೋದಿ ಯಾವಾಗಲೂ ವಿದ್ಯಾ ರ್ಥಿಗಳ ವಿಷಯದಲ್ಲಿ ಹಾಗೂ ಅವರ ಉಜ್ವಲ ಭವಿಷ್ಯದ ಬಗ್ಗೆ ಸೂಕ್ಷ್ಮವಾಗಿ ಯೋಚಿಸುತ್ತಾರೆ. ಅವರ ಮನೋಬಲವನ್ನು ಹೆಚ್ಚಿಸಲು ಕಾಲಕಾಲಕ್ಕೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತಾರೆ ಎಂದರು.

