ಇಸ್ಲಾಮಾಬಾದ್ : ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ತನ್ನ ಮೇಲೆ ದಾಳಿ ನಡೆಸುವುದು ಖಚಿತ ಎಂದು ಬೆಚ್ಚಿ ಬಿದ್ದಿರುವ ಪಾಕಿಸ್ತಾನ ‘ಇದೀಗ ನಿಮ್ಮ ಪ್ರಭಾವ ಬಳಸಿ ಭಾರತ ಯುದ್ಧ ಮಾಡದಂತೆ ತಡೆಯಿರಿ ಎಂದು ಮುಸ್ಲಿಂ ದೇಶಗಳಿಗೆ ದುಂಬಾಲು ಬಿದ್ದಿದೆ. ಇಂಥದ್ದೇ ಮನವಿಯೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮಾಡಿದ ಮರುದಿನವೇ ಯುದ್ಧ ತಡೆಯಲು ತನ್ನೆಲ್ಲಾ ಶಕ್ತಿ ಬಳಸಲು ಪಾಕ್ ಮುಂದಾಗಿದೆ.
ಭಾರತಕ್ಕೂ ಮಿತ್ರ ದೇಶಗಳಾಗಿರುವ ಸೌದಿ ಅರೇಬಿಯಾ, ಯುಎಇ. ಕುವೈತ್ನ ಪಾಕಿಸ್ತಾನದಲ್ಲಿರುವ ರಾಯಭಾರಿಗಳನ್ನು ಶುಕ್ರವಾರ ಭೇಟಿಯಾಗಿದ್ದ ಪ್ರಧಾನಿ ಶೆಹಬಾಜ್ ಶರೀಫ್ ಇಂಥದ್ದೊಂದು ಮನವಿ ಮಾಡಿದ್ದಾರೆ.
ದಕ್ಷಿಣ ಏಷ್ಯಾ ಭಾಗದಲ್ಲಿ ಶಾಂತಿ ಹಾಗೂ ಸ್ಥಿರತೆ ಸ್ಥಾಪನೆ ಪಾಕಿಸ್ತಾನದ ಆಸೆ. ಕಳೆದ 15 ತಿಂಗಳಿನಿಂದ ನಿಮ್ಮ ನೆರವಿನಿಂದ ಪಾಕಿಸ್ತಾನವು ಮಾಡಿರುವ ಸಾಧನೆಗಳನ್ನು ಅಪಾಯಕ್ಕೆ ಸಿಲುಕಿಸುವುದು ನನಗೆ ಇಷ್ಟವಿಲ್ಲ ನಾವು ಬೇಜವಾಬ್ದಾರಿಯಿಂದ ವರ್ತಿಸುವುದು ಊಹಿಸಲೂ ಸಾಧ್ಯವಿಲ್ಲ ಎಂದಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ, ‘ಪಹಲ್ಲಾಂ ಘಟನೆ ಕುರಿತು ಮೂರನೇ ತಟಸ್ಥ ದೇಶವೊಂದರಿಂದ ಪಾರದರ್ಶಕ ಮತ್ತು ನ್ಯಾಯಸಮ್ಮತ ತನಿಖೆಗೆ ಪಾಕಿಸ್ತಾನ ಈಗಲೂ ಸಿದ್ದ ಎಂದೂ ಶೆಹಬಾಜ್ ಮೂರೂ ದೇಶಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಶೆಹಬಾಜ್ ಮೊರೆಗೆ ಪ್ರತಿಯಾಗಿ ಮೂರೂ ರಾಯಭಾರಿಗಳು, ‘ನಮ್ಮ ದೇಶಗಳು ಪ್ರಾದೇಶಿಕ ಶಾಂತಿ ಮತ್ತು ಭದ್ರತೆ ಕಾಪಾಡಲು ಪಾಕಿಸ್ತಾನದೊಂದಿಗೆ ಕೆಲಸ ಮಾಡಲಿವೆ’ ಎಂಬ ಭರವಸೆ ನೀಡಿದ್ದಾರೆ.

