ಹೊಸದಿಲ್ಲಿ : ಗುಲಾಮಗಿರಿ ಚಿಂತನೆಯ ಸಂಕೋಲೆಗಳಿಂದ ಮುಕ್ತಗೊಂಡು ನಿರಾಳ ಉಸಿರಾಡುತ್ತಿರುವ ರಾಷ್ಟ್ರವೊಂದರ ನವ ಜಾಗೃತ ಆತ್ಮಸಾಕ್ಷಿಯ ಪ್ರತೀಕವಾಗಿದೆ ಮಹಾಕುಂಭಮೇಳ. ಹೀಗೆಂದು ಭೂಮಿಯ ಬೃಹತ್ ಧಾರ್ಮಿಕ-ಆಧ್ಯಾತ್ಮಿಕ ಮೇಳವನ್ನು ಬಣ್ಣಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಏಕತೆಯ ಮಹಾಯಜ್ಞ ಸಮಾಪನಗೊಂಡಿದೆ. ಇನ್ನೀಗ ವಿಕಸಿತ ಭಾರತ ಧೈಯದ ಸಾಕಾರಕ್ಕಾಗಿ, ಮಹಾಕುಂಭಮೇಳದಲ್ಲಿ ಮೆರೆದ ಆತ್ಮವಿಶ್ವಾಸ ಮತ್ತು ಏಕತೆಯೊಂದಿಗೆ ಮುಂದಡಿ ಇಡೋಣ ಎಂದವರು ದೇಶವಾಸಿಗಳಿಗೆ ಮೋದಿ ಬ್ಲಾಗ್ನಲ್ಲಿ ಈ ರೀತಿ ಕರೆ ಕೊಟ್ಟಿದ್ದಾರೆ.
ಭಕ್ತರು ದೇವರ ಸಮಾನ :
ಮಹಾಕುಂಭಮೇಳದಲ್ಲಿ ಯಾವುದೇ ಸೇವೆಯಲ್ಲಿ ಏನೇ ಕೊರತೆಯಾಗಿದ್ದರೂ ಕ್ಷಮಿಸಬೇಕು ಎಂದು ಗಂಗೆ, ಯಮುನೆ ಮತ್ತು ಸರಸ್ವತಿ ಮಾತೆಯರ ಕ್ಷಮೆ ಕೋರಿರುವ ಪ್ರಧಾನಿ ಮೋದಿ, ಕುಂಭ ಮೇಳದಲ್ಲಿ ಪಾಲ್ಗೊಂಡ ಭಕ್ತಕೋಟಿ ತನಗೆ ದೇವರ ಸಮಾನ, ಹಾಗಾಗಿ ಸೇವಾ ವಿಚಾರದಲ್ಲಿ ಯಾವುದೇ ಲೋಪವಾಗಿದ್ದರೂ ಭಕ್ತರು ಕೂಡ ತನ್ನನ್ನು ಕ್ಷಮಿಸಬೇಕು ಎಂದಿದ್ದಾರೆ.
ಯೋಗಿ ನಾಯಕತ್ವದಲ್ಲಿ ಯಶಸ್ವೀ ಏಕತಾ ಮೇಳ
ಮಹಾಕುಂಭದಂತಹ ಬೃಹತ್ ಆಧ್ಯಾತ್ಮಿಕ-ಧಾರ್ಮಿಕ ಮೇಳಕ್ಕೆ ಭಾರೀ ವ್ಯವಸ್ಥೆಗಳ ಆಯೋಜನೆ ಸುಲಭ ಕಾರ್ಯವಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಯಕತ್ವದಲ್ಲಿ ಉತ್ತರ ಪ್ರದೇಶ ಸರಕಾರ, ಆಡಳಿತ ವ್ಯವಸ್ಥೆ ಮತ್ತು ಜನರು ಒಟ್ಟಾಗಿ ಏಕತೆಯ ಮಹಾಕುಂಭವನ್ನು ಅತ್ಯಂತ ಯಶಸ್ವಿಗೊಳಿಸಿದ್ದಾರೆ ಎಂದು ಮೋದಿ ತಮ್ಮ ಬ್ಲಾಗ್ನಲ್ಲಿ ಪ್ರಶಂಸಿಸಿದ್ದಾರೆ. ಶುಚಿತ್ವ ಸಿಬ್ಬಂದಿ, ಪೊಲೀಸ್, ದೋಣಿಗಳ ನಾವಿಕರಾಗಲಿ, ಚಾಲಕರು, ಅಡುಗೆಯವರು ಹೀಗೆ ಪ್ರತಿಯೊಬ್ಬರು ಶ್ರದ್ದೆ ಮತ್ತು ಸೇವಾಭಾವದಿಂದ ನಿರಂತರ ದುಡಿಯುವ ಮುಖೇನ ಮೇಳವನ್ನು ಅತ್ಯಂತ ಯಶಸ್ವಿಗೊಳಿಸಿದ್ದಾರೆ. ಯಶಸ್ಸಿಗೆ ಪ್ರಯಾಗರಾಜ್ ನಿವಾಸಿಗಳ ಕೊಡುಗೆಯೂ ಅಪಾರ ಎಂದಿದ್ದಾರೆ

