ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ವರ್ಷದಲ್ಲಿ ಸರ್ವಸ್ಪರ್ಶಿ ಮತ್ತು ಸರ್ವವ್ಯಾಪಿ, ದೇಶದ ಪ್ರತಿಯೊಂದು ಮೂಲೆಗೂ ಹಾಗೂ ಸಮಾಜದ ಪ್ರತಿಯೊಂದು ವರ್ಗಕ್ಕೂ ಸಂದೇಶ ಕೊಂಡೊಯ್ಯುವ ಪ್ರಮುಖ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದರು. ದಿಲ್ಲಿಯ ಕೇಶವ್ ಕುಂಜ್ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರು ದಿನಗಳ ಅಖಿಲ ಭಾರತ ಪ್ರಾಂತ ಪ್ರಚಾರಕ ಬೈಠಕ್ನ ತರುವಾಯ ಸೋಮವಾರ ಅವರು ಸುದ್ದಿಗೋಷ್ಠಿ ನಡೆಸಿದರು.
ಪ್ರಾಂತ ಪ್ರಚಾರಕ ಬೈಠಕ್ನಲ್ಲಿ ಶತಮಾನೋತ್ಸವ ವರ್ಷದ ಯೋಜನೆಯನ್ನು ಚರ್ಚಿಸಲಾಗಿದೆ. ವಿಜಯದಶಮಿ ಉತ್ಸವದೊಂದಿಗೆ ಶತಮಾನೋತ್ಸವ ವರ್ಷವನ್ನು ಉದ್ಘಾಟಿಸಲಾಗುವುದು. ದೇಶಾದ್ಯಂತ ಆಯೋಜಿಸಲಾದ ವಿಜಯದಶಮಿ ಉತ್ಸವಗಳಲ್ಲಿ ಎಲ್ಲ ಸ್ವಯಂಸೇವಕರು ಭಾಗವಹಿಸಲಿದ್ದಾರೆ. ಸಮಾಜದ ಗಣ್ಯ ವ್ಯಕ್ತಿಗಳು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಶತಾಬ್ಲಿ ವರ್ಷದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮಂಡಲ ಮಟ್ಟದಲ್ಲಿ, ನಗರ ಪ್ರದೇಶಗಳಲ್ಲಿ ಬಸ್ತಿ (ವಸತಿ) ಮಟ್ಟದಲ್ಲಿ ಸಮಾಜದ ಎಲ್ಲ ವರ್ಗಗಳ ಭಾಗವಹಿಸುವಿಕೆಯೊಂದಿಗೆ ಹಿಂದು ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ.
ಪ್ರಸ್ತುತ, ದೇಶದಲ್ಲಿ 58,964 ಮಂಡಲಗಳು ಮತ್ತು 44,055 ಬಸ್ತಿಗಳು ಸೇರಿ 1,03,019 ಸ್ಥಳ ಗಳಲ್ಲಿ ಹಿಂದು ಸಮ್ಮೇಳನ ನಡೆಯಲಿವೆ. ಹಿಂದು ಸಮ್ಮೇಳನ ಗಳಲ್ಲಿ ಸಾಮಾಜಿಕ ಹಬ್ಬಗಳು, ಸಾಮಾಜಿಕ ಏಕತೆ ಮತ್ತು ಸಾಮರಸ್ಯದ ವಿಷಯಗಳು ಹಾಗೂ ಪಂಚ ಪರಿವರ್ತನವನ್ನು ಚರ್ಚಿಸಲಾಗುವುದು ಎಂದರು.

