ಭುಜ್ : ಪಾಕ್ ಗೆ ನೀಡೋ ಒಂದು ಬಿಲಿಯನ್ ಡಾಲರ್ ನೆರವನ್ನು ಅದು ಭಯೋತ್ಪಾದನೆಗೆ ದುರ್ಬಳಕೆ ಮಾಡುವ ಭೀತಿ ಇದೆ. ಹಾಗಾಗಿ ಪಾಕ್ನ ಸಾಲ ಬೇಡಿಕೆಯನ್ನು ಮರು ಪರಿಶೀಲಿಸುವಂತೆ ಭಾರತವು ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್) ಕರೆಯಿತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಪಾಕ್ ಮುಖವಾಡ ಪೂರ್ಣ ಕಳಚಿ ಬಿದ್ದಿದೆ. ಸೇನೆಯ ಘನಘೋರ ದಾಳಿಯಿಂದ ನಿರ್ನಾಮವಾಗಿರುವ ಭಯೋತ್ಪಾದಕ ನೆಲೆಗಳನ್ನು ಮತ್ತೆ ನಿರ್ಮಿಸುವ ಗಡಿಬಿಡಿಯಲ್ಲಿದೆ ಪಾಕಿಸ್ಥಾನ. ಇದಕ್ಕಾಗಿ ಪಾಕ್ನ ಸಾಮಾನ್ಯ ನಾಗರಿಕರಿಂದ ತೆರಿಗೆ ಸಂಗ್ರಹಿಸಲು ಶುರುವಿಟ್ಟಿದೆ. ಈ ತೆರಿಗೆ ದುಡ್ಡನ್ನು ಪಾಕ್ ಸರಕಾರ ಜೈಶ್ ಮೊಹಮ್ಮದ್ನ ರೂವಾರಿ ಮತ್ತು ವಿಶ್ವಸಂಸ್ಥೆ ಯಾದಿಯಲ್ಲಿರುವ ಭಯೋತ್ಪಾದಕ ಮಸೂದ್ ಅಜರ್ಗೆ ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆತಂಕ ವ್ಯಕ್ತಪಡಿಸಿದರು

ನಿರ್ಧಾರ ಮರು ಪರಿಶೀಲಿಸಬೇಕು :
ಪಾಕ್ ಗೆ ಹಣಕಾಸು ನೆರವು ನೀಡುವ ನಿರ್ಧಾರವನ್ನು ಐಎಂಎಫ್ ಮರು ಪರಿಶೀಲಿಸಬೇಕು ಮತ್ತು ಭವಿಷ್ಯದಲ್ಲೂ ಪಾಕ್ ಗೆ ನೆರವು ನೀಡುವ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು. ಆಪರೇಶನ್ ಸಿಂಧೂರ್ನಲ್ಲಿ ಸಶಸ್ತ್ರ ಪಡೆಗಳು ಶತ್ರುಗಳ ಮೇಲೆ ಹಿಡಿತ ಸಾಧಿಸಿದ್ದು, ನಿರ್ಮೂಲನೆಯಲ್ಲೂ ಯಶಸ್ವಿಯಾಗಿರುವುದು ಪ್ರಶಂಸಾರ್ಹ. ಆಪರೇಷನ್ ಸಿಂಧೂರ್ ರೂವಾರಿ ಪ್ರಧಾನಿ ಮೋದಿ ಎಂದು ಪ್ರಶಂಸಿಸಿದರು

