ಹೊಸದಿಲ್ಲಿ : ವಿಶ್ವದ ವಲಸಿಗರೆಲ್ಲರಿಗೂ ಭಾರತವೇ ಆತಿಥ್ಯ ನೀಡಬೇಕೆ ? ನಾವು 140 ಕೋಟಿ ಜನರಿಂದ ಪರದಾಡುತ್ತಿದ್ದೇವೆ. ವಿದೇಶಿ ವಲಸಿಗರೆಲ್ಲರಿಗೂ ಆತಿಥ್ಯ ನೀಡಲು ಭಾರತ ಏನು ಧರ್ಮಛತ್ರವೇ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ಸೋಮವಾರ ಶ್ರೀಲಂಕಾ ತಮಿಳು ವಲಸಿಗನ ಅರ್ಜಿ ತಿರಸ್ಕರಿಸಿದೆ.
ಶ್ರೀಲಂಕಾ ತಮಿಳು ಭಯೋತ್ಪಾದಕ ಸಂಘಟನೆ ಎಲ್ಟಿಟಿಇ ಸಂಪರ್ಕ ಹೊಂದಿದ್ದ ಆರೋಪದಲ್ಲಿ 2015ರಲ್ಲಿ ಬಂಧಿ ಸಲ್ಪಟ್ಟಿದ್ದ ಶ್ರೀಲಂಕಾ ತಮಿಳಿಗನ ವಲಸೆ ಅರ್ಜಿಯನ್ನು, ನ್ಯಾಯ ಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಕೆ. ವಿನೋದ್ ಚಂದ್ರನ್ ಅವರ ದ್ವಿಸದಸ್ಯ ಪೀಠ ತಿರಸ್ಕರಿಸಿದೆ.
2018ರಲ್ಲಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಲ್ಲಿ 10 ವರ್ಷ ಜೈಲು ಶಿಕ್ಷೆಗೊಳಗಾಗಿದ್ದ 2022ರಲ್ಲಿ ಮದ್ರಾಸ್ ಹೈಕೋರ್ಟ್ 3 ವರ್ಷ ಶಿಕ್ಷೆ ಕಡಿತಗೊಳಿಸಿದ್ದು, 7 ವರ್ಷ ಶಿಕ್ಷೆ ಅನುಭವಿಸಿದ ತಕ್ಷಣವೇ ವಲಸಿಗರ ಶಿಬಿರವನ್ನು ಸೇರಿ ದೇಶ ಬಿಡುವಂತೆ ಆದೇಶಿಸಿತ್ತು. ಶ್ರೀಲಂಕಾ ತಮಿಳು ಅರ್ಜಿದಾರ, ಶ್ರೀಲಂಕಾದಲ್ಲಿ ಪ್ರಾಣಾಪಾಯ ಇರುವುದರಿಂದ ವೀಸಾ ಪಡೆದು ಭಾರತಕ್ಕೆ ಬಂದಿದ್ದೇನೆ. ಪತ್ನಿ ಮತ್ತು ಮಕ್ಕಳು ಭಾರತದಲ್ಲಿ ನೆಲೆಸಿದ್ದು, ನಾನು ಕಳೆದ 3 ವರ್ಷಗಳನ್ನು ವಲಸಿಗರ ಶಿಬಿರದಲ್ಲಿ ಕಳೆದಿದ್ದೇನೆ. ಗಡಿಪಾರು ಪ್ರಕ್ರಿಯೆ ಆರಂಭಗೊಂಡಿಲ್ಲ. ನೆಲೆಸಲು ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂಗೆ ಮನವಿ ಮಾಡಿದ್ದರು. ಭಾರತದಲ್ಲಿ ನೆಲೆಸಲು ನಿಮಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್ ನೀವು ಬೇರೆ ದೇಶಕ್ಕೆ ವಲಸೆ ಹೋಗಿ ಎಂದಿದೆ

