ಮೈಸೂರು : ಅರಮನೆ ನಗರಿ ಮೈಸೂರಿನ ರಾಜಮಾತೆ ಪ್ರಮೋದಾ ದೇವಿ ಒಡೆಯಾರ್ ಅವರು ಆಂದ್ರಪ್ರದೇಶದ ತಿರುಮಲದಲ್ಲಿರುವ ತಿಮ್ಮಪ್ಪನ ದೇವಸ್ಥಾನಕ್ಕೆ ಎರಡು ಬೃಹತ್ ಬೆಳ್ಳಿಯ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಪ್ರತಿ ಬೆಳ್ಳಿ ದೀಪ ಸುಮಾರು 50 ಕೆ.ಜಿ ತೂಕ ಇದೆ. ಎರಡೂ ದೀಪಗಳು ಸೇರಿ ಒಂದು ಕ್ವಿಂಟಾಲ್ ತೂಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುಪತಿ ದೇವಸ್ಥಾನಕ್ಕೆ ಭೇಟಿ. ನೀಡಿದ ಪ್ರಮೋದಾ ದೇವಿ ಒಡೆಯಾರ್ ಅವರಿಂದ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮತ್ತು ದೇವಾಲಯದ ಅಧಿಕಾರಿಗಳು ರಂಗನಾಯಕುಲ ಮಂಟಪದಲ್ಲಿ ಬೆಳ್ಳಿ ದೀಪಗಳನ್ನು ಸ್ವೀಕರಿಸಿದರು. ಈ ವೇಳೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಮೋದಾದೇವಿ ಒಡೆಯರ್ ಅವರ ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ, ಮಕ್ಕಳು, ಕುಟುಂಬದವರು ಹಾಜರಿದ್ದರು.
ದೇವಸ್ಥಾನದ ಗರ್ಭಗುಡಿಯಲ್ಲಿ ಬೆಳ್ಳಿ ದೀಪಗಳನ್ನು ಬೆಳಗಿಸುವುದು ಸಂಪ್ರದಾಯ. ಸುಮಾರು 300 ವರ್ಷಗಳ ಹಿಂದೆ, ಅಂದಿನ ಮೈಸೂರು ಮಹಾರಾಜರು ಬೃಹತ್ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದರು.
ಅವುಗಳನ್ನು ಗರ್ಭಗುಡಿಯಲ್ಲಿ ಬೆಳಗಿಸಲಾಗುತ್ತಿದೆ. ಮೂರು ಶತಮಾನಗಳ ನಂತರ ಮೈಸೂರಿನ ರಾಜಮಾತೆ ಪ್ರಮೋದಾ ದೇವಿ ಒಡೆಯಾರ್ ಮತ್ತೊಮ್ಮೆ ಬೆಳ್ಳಿ ದೀಪಗಳನ್ನು ಕಾಣಿಕೆ ನೀಡಿ ಗಮನ ಸೆಳೆದಿದ್ದಾರೆ.

