ಮಂಗಳೂರು : ರಾಜ್ಯದಲ್ಲಿ ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡುವ ಮೂಲಕ ದುಷ್ಟ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜಪೇಟೆ, ಹೊನ್ನಾವರ ರಾಮನಗರದ ನಂತರ ಇದೀಗ ಶಿವಮೊಗ್ಗದ ಹೊಸನಗರದಲ್ಲಿ ಹಾಲುಣಿಸುವ ಗೋವಿನ ಕೆಚ್ಚಲನ್ನು ಕತ್ತರಿಸಲಾಗಿದೆ. ಬೆಳಗಾವಿಯ ಹುಕ್ಕೇರಿಯಲ್ಲಿ ಗೋರಕ್ಷಕರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿದ್ದು, ಇವೆಲ್ಲವನ್ನು ನೋಡಿದರೆ ದುಷ್ಟ ಶಕ್ತಿಗಳು ಕಾನೂನಿನ ಯಾವುದೇ ಭಯವಿಲ್ಲದೇ ಹಿಂದೂ ಸಮುದಾಯದ ಭಾವನೆಗಳನ್ನು ಕೆಣಕುತ್ತಿರುವುದು ಸ್ಪಷ್ಟವಾಗುತ್ತಿದೆ.
ಈ ಸರ್ಕಾರ ಬಂದ ಮೇಲೆ ಹಿಂದೂಗಳ ಪ್ರಾಣಕ್ಕೂ ಬೆಲೆ ಇಲ್ಲ, ಮೂಕ ಜೀವಿಗಳಿಗೂ ರಕ್ಷಣೆ ಇಲ್ಲದಂತಾಗಿದೆ. ಗಾವೋ ವಿಶ್ವಸ್ಯ ಮಾತರಃ ಎಂದ ನಾಡಲ್ಲಿ ಇಂತಹ ಪರಿಸ್ಥಿತಿ ಬಂದಿರುವುದು ದುರಂತ ಎಂದು ಅವರು ಹೇಳಿದ್ದಾರೆ. ಕೂಡಲೇ ಗೋಹತ್ಯಾ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ನಡೆಯಬೇಕು. ಇಂತಹ ವಿಕೃತಿ ಮೆರೆಯುವ ದುಷ್ಕರ್ಮಿಗಳಿಗೆ ಯಾವುದೇ ಕರುಣೆ ತೋರದೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

