ಉಡುಪಿ : ಉಡುಪಿ ಜಿಲ್ಲೆಯಲ್ಲಿ ಸೋಮವಾರವೂ ಭಾರಿ ಮಳೆಯಾಗಿದೆ. ದಿನವಿಡಿ ಬಿಡದೇ ಸುರಿದ ಮಳೆಗೆ ನದಿಗಳಲ್ಲಿ ನೀರು ತುಂಬಿದ್ದು, ಅಕ್ಕಪಕ್ಕದ ಪ್ರದೇಶಗಳಲ್ಲಿ ಪ್ರವಾಹದ ಉಂಟಾಗಿದೆ. ಇನ್ನೂ 4 ದಿನ ರೆಡ್ ಅಲರ್ಟ್ ಘೋಷಿಸಿರುವುದರಿಂದ, ನದಿ ಪಾತ್ರಗಳಲ್ಲಿ ಪ್ರವಾಹದ ಪರಿಸ್ಥಿತಿ ಜನರ ಆತಂಕಕ್ಕೆ ಕಾರಣವಾಗಿದೆ. ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 65.40 ಮಿ.ಮೀ. ಮಳೆಯಾಗಿದೆ. ಜೊತೆಗೆ ಗಾಳಿ ಮಳೆಯಿಂದ ಜಿಲ್ಲೆಯಲ್ಲಿ 17ಕ್ಕೂ ಹೆಚ್ಚು ಮನೆಗಳಿಗೆ, ಒಂದು ಅಡಕೆ ತೋಟಕ್ಕೆ ಗಣನೀಯ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಭಾರತೀಯ ಹವಾಮಾನ ಇಲಾಖೆ ಮೇ 30ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ರೆಡ್ ಅಲರ್ಟ್ ಮುಂದುವರಿಸಿದೆ. ಸಮುದ್ರ ತೀರದಲ್ಲಿ ಗಂಟೆಗೆ 45- 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಗಾಳಿ ಮಳೆಗೆ ಮರಗಳು ಉರುಳಿ ಬಿದ್ದು, ಕಾಪು ತಾಲೂಕಿನ ನಾಲು ಗ್ರಾಮದಲ್ಲಿ ಭಾನು ಅವರ ಮನೆಗೆ 10,000 ರು., ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಶರಾವತಿ ಅವರ ಮನೆಗೆ 20,000 ರು., ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಗುಲಾಬಿ ಬಾಬು ಅವರ ಮನೆಗೆ 15,000, ಕೊರ್ಗಿ ಗ್ರಾಮದ ಗಿರಿಜಾ ಬಾಬು ಅವರ ಮನೆಗೆ 10,000 ರು., ಉಡುಪಿ ತಾಲೂಕಿನ ಕಡೆಕಾರು ಗ್ರಾಮದ ರುಕ್ಕಿಣಿ ಶೆಟ್ಟಿ ಅವರ ಮನೆಗೆ 50,000 ರು. ನಷ್ಟು ನಷ್ಟ ಸಂಭವಿಸಿದೆ. ಎಂದು ತಿಳಿದು ಬಂದಿದೆ

