ಬೆಂಗಳೂರು : ಭೂ ವಿವಾದ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಷು ಶಿವನ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ, ಬೆಂಗಳೂರಿನ ಕೆ.ಆರ್.ಪುರ ಬಿಜೆಪಿ ಶಾಸಕ ಬೈರತಿ ಬಸವರಾಜು ಸೇರಿ ಐವರ ವಿರುದ್ಧ ಭಾರತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಕೊಲೆಯಾದವನು ಮತ್ತು ಆರೋಪಿಗಳು ಇಬ್ಬರೂ ನನಗೆ ಗೊತ್ತಿಲ್ಲ ಎಂದು ಬೈರತಿ ಬಸವ ರಾಜ್ ಸ್ಪಷ್ಟಿಕರಣ ನೀಡಿದ್ದು, ಈ ಬೆನ್ನಲ್ಲೇ ಪ್ರಯಾಗರಾಜ್ನಲ್ಲಿ ಇತ್ತೀಚೆಗೆ ನಡೆದ ಕುಂಭಮೇಳದಲ್ಲಿ ಪ್ರಮುಖ ಆರೋಪಿ ಹೆಣ್ಣೂರು ಜಗದೀಶ್ ಜತೆಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಶಾಸಕರಿಗೆ ಸಂಕಷ್ಟ ತಂದಿಟ್ಟಿದೆ.
ಕೊಲೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ
ನನಗೂ, ಶಿವಪ್ರಕಾಶ್ ಅಲಿಯಾಸ್ ಬಿಕ್ಷು ಶಿವನ ಕೊಲೆ ಪ್ರಕರಣಕ್ಕೂ ಯಾವ ಸಂಬಂಧ ಇಲ್ಲ. ಕೊಲೆಯಾದವನು ಮತ್ತು ಕೊಲೆ ಮಾಡಿದ ಆರೋಪಿಗಳು ಇಬ್ಬರೂ ನನಗೆ ಗೊತ್ತಿಲ್ಲ. ರಾಜಕೀಯ ದುರುದ್ದೇಶದಿಂದ ಕೊಲೆ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ಎಫ್ಐಆರ್ನಿಂದ ನನ್ನ ಹೆಸರು ತೆಗೆಯಲು ಕಾನೂನು ಹೋರಾಟ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಬೈರತಿ ಬಸವರಾಜ್ ತಿಳಿಸಿದ್ದಾರೆ

