ಮೂಡ್ಲಕಟ್ಟೆ : ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿ ದಿನಾಂಕ 9/03/2026ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಂತರಿಕ ದೂರು ಸಮಿತಿಯು ಎಂಬಿಎ ವಿಭಾಗದ ಸಹಯೋಗದೊಂದಿಗೆ, “ ಲೀಡ್ ಹರ್ ಷಿಪ್ : ಸೆಲೆಬ್ರೇಟಿಂಗ್ ವುಮೆನ್ ಲೀಡರ್ಸ್ ” ಎಂಬ ಶೀರ್ಷಿಕೆಯ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಶ್ರೀಮತಿ ವಿಂಧ್ಯಾ ಎನ್ ಎಂ, , ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಶ್ರೀಮತಿ ಪೂರ್ಣಿಮಾ ಭೋಜರಾಜ, ಗ್ರೇಡೇಡ್ ಕಲಾವಿದರು ಎ ಐ ಆರ್ ಮತ್ತು ದೂರದರ್ಶನ, ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಆಟಗಾರ್ತಿ, ಯಶಸ್ವೀ ವಾಣಿಜ್ಯೋದ್ಯಮಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಶ್ರೀಮತಿ ವಿಂದ್ಯಾರವರು ಮಾತನಾಡುತ್ತ ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ನೂರಾರು ಕೆಲಸಗಳ ಗಡಿಬಿಡಿಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕೂಡ ಸಮಯವಿಲ್ಲದೆ ನೂರಾರು ಕಾಯಿಲೆಗಳಿಗೆ ಒಳಪಡುತ್ತಿದ್ದಾರೆ. ಇದಕ್ಕೆಲ್ಲ ನೈಸರ್ಗಿಕ ಪರಿಹಾರವೆಂದರೆ ಮೊದಲು ಮಹಿಳೆಯರು ತಮ್ಮನ್ನು ತಾವು ಪ್ರೀತಿಸಬೇಕು, ತಮ್ಮ ಆರೋಗ್ಯ ಕಾಪಾಡಿಕೊಂಡು ಸಾಧನೆಗೈದರೆ ಡೊಪೋಮಿನ್ ಎನ್ನುವ ರಾಸಾಯನಿಕ ಬಿಡುಗಡೆಯಾಗಿ ದೈಹಿಕ ಮತ್ತು ಮಾನಸಿಕವಾಗಿ ಇನ್ನೂ ಸದೃಢವಾಗಲು ಇದು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಗೌರವ ಅಥಿತಿ ಶ್ರೀಮತಿ ಪೂರ್ಣಿಮಾ ಭೋಜರಾಜ ಇವರು ತಮ್ಮ ಎಪ್ಪತ್ತರ ಹರೆಯದಲ್ಲಿಯೂ ಕೂಡ 20ರ ಹರೆಯದವರನ್ನು ನಾಚಿಸುವ ಲವಲವಿಕೆಯಿಂದ ಮಾತನಾಡುತ್ತಾ ಪ್ರತಿಯೋರ್ವ ಮಹಿಳೆಯು ಸ್ವಾವಲಂಬಿಗಳಾಗಿ ಸಾಧನೆ ಮಾಡಬೇಕು,ತಮ್ಮ ಕಲಾಸಕ್ತಿ ಮತ್ತು ಕ್ರೀಡಾ ಚಟುವಟಿಕೆ ತಮಗೆ ತುಂಬಾ ಸಹಾಯ ಮಾಡಿದೆ ಅಂದರು. ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿದ ಎರಡೂ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಇವರು ಕುಟುಂಬ ಸದೃಢವಾಗಿರಲು ಮಹಿ ಳೆಯರ ಕೊಡುಗೆ ಅಪಾರ ಮತ್ತು ತುಂಬಾ ಪ್ರಶಂಶನಿಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಐ ಎಂ ಜೆ ಶಿಕ್ಷಣ ಸಂಸ್ಥೆಗಳ ಡೈರೆಕ್ಟರ್ ಅಕಾಡೆಮಿಕ್ಸ್ , ಡಾ. ಎಸ್ ಎನ್ ಭಟ್ ಮಾತನಾಡಿ ಮಹಿಳೆಯರು ಅವಕಾಶ ಸಿಕ್ಕಿದಲ್ಲೆಲ್ಲ ತಾವು ಪರಿಣಾಮಕಾರಿ ನಾಯಕರೆಂದು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಎಲ್ಲಾ ಸಂಸ್ಥೆ ಗಳಲ್ಲಿ, ಕೈಗಾರಿಕಾ ವಲಯಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಐ ಎಂ ಜೆ ವಿದ್ಯಾಸಂಸ್ಥೆಗಳಲ್ಲಿಯೂ ಕೂಡಾ ಮಹಿಳೆಯರ ಶೇಕಡಾವಾರು ಸಂಖ್ಯೆ ಚೆನ್ನಾಗಿ ಇದೆ ಎಂದು ತಿಳಿಸಿದರು . ಹೆಚ್ಚಿನ ಮಹಿಳೆಯರು ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ನಿರಂತರ ಶ್ರಮವಹಿಸಿ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿರುತ್ತಾರೆ ಎಂದು ತಿಳಿಸಿದರು. ಎಂ ಐ ಟಿ ಕುಂದಾಪುರದ ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿ ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿದರು.
ನೀಲ್ ಗ್ಲ್ಯಾಡ್ವಿನ್ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

