ತೆಕ್ಕಟ್ಟೆ : ವಿದ್ಯಾಗಿರಿ ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ ಗುಡ್ಡಿ ಶಾಲೆ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳ ವತಿಯಿಂದ ಶಾಲೆಗೆ ಲ್ಯಾಪ್ಟಾಪ್ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಸುರೇಶ್ ಬೆಟ್ಟಿನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ವಿಶಾಖ ಹಾಗೂ ಶ್ರೀ ಪ್ರಮೋದ್ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತಂತ್ರಜ್ಞಾನ ಅತ್ಯಂತ ಅಗತ್ಯವಾಗಿದ್ದು, ಗ್ರಾಮೀಣ ಭಾಗದ ಮಕ್ಕಳಿಗೂ ಉತ್ತಮ ಕಂಪ್ಯೂಟರ್ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಲ್ಯಾಪ್ಟಾಪ್ನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಮುಖ್ಯ ಅತಿಥಿಗಳು ತಮ್ಮ ಮಾತಿನಲ್ಲಿ ತಿಳಿಸಿದರು. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಅಧ್ಯಕ್ಷೀಯ ನುಡಿಯಲ್ಲಿ ಶ್ರೀ ಸುರೇಶ್ ಬೆಟ್ಟಿನ್ , ಶಾಲೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಕಾರ ಶ್ಲಾಘನೀಯವಾಗಿದೆ. ಇಂತಹ ಕೊಡುಗೆಗಳು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶ್ರೀ ಸಂಜೀವ ಗುಂಡ್ಮಿ ಉಪನ್ಯಾಸಕರು , ಕಾರ್ಯದರ್ಶಿಗಳಾದ ಶ್ರೀ ಕಮಲಾಕ್ಷ ಪೈ ಹಾಗೂ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀಮತಿ ಗಾಯತ್ರಿ ಮಾತಾಜಿ ಸ್ವಾಗತಿಸಿ, ಶ್ರೀಮತಿ ದಿವ್ಯಾ ಎಸ್ ವಂದಿಸಿದರೆ, ಶ್ರೀಮತಿ ಶೃತಿ ಕಾರ್ಯಕ್ರಮ ನಿರೂಪಿಸಿದರು.

