101
ಇಸ್ಲಾಮಾಬಾದ್ : ಸಿಂಧೂ ನದಿಯ ಉಪನದಿಯಾದ ರಾವಿಯಲ್ಲಿ ಭಾರೀ ಪ್ರವಾಹದ ಕುರಿತು ಭಾರತ ನೀಡಿದ ಎರಡು ಮುನ್ನೆಚ್ಚರಿಕೆ ಸಂದೇಶವು, ಪಾಕಿಸ್ತಾನದಲ್ಲಿ ಕನಿಷ್ಠ 1.5 ಲಕ್ಷ ಜನರ ಜೀವ ಕಾಪಾಡಿದೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಪಹಲ್ಗಾಮ್ ದಾಳಿ ಬಳಿಕ ಪಾಕ್ನೊಂದಿಗಿನ ಸಿಂಧೂ ನದಿ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದೆ. ಹೀಗಾಗಿ ನದಿ, ನೀರಿನ ಹರಿವು, ಅಣೆಕಟ್ಟಿನಿಂದ ನೀರು ಬಿಡುಗಡೆ ಕುರಿತು ಪಾಕ್ ನೊಂದಿಗೆ ಭಾರತ ಯಾವುದೇ ಮಾಹಿತಿ ಹಂಚಿಕೊಳ್ಳಬೇಕಿಲ್ಲ.
ಇದರ ಹೊರತಾಗಿಯೂ ಭಾರತ ಮಾನವೀಯ ದೃಷ್ಟಿಯಿಂದ ಇತ್ತೀಚೆಗೆ ಎರಡು ಬಾರಿ ಭಾರೀ ಪ್ರವಾಹದ ಮುನ್ನೆಚ್ಚರಿಕೆ ನೀಡಿತ್ತು. ಹೀಗಾಗಿ ಸಮಯಕ್ಕೆ ಸರಿಯಾಗಿ ಪಾಕ್ ಸರ್ಕಾರ 1.5 ಲಕ್ಷ ಜನರನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಿ ಅವರ ಜೀವ ಉಳಿಸಿದೆ.

