ಹೊಸದಿಲ್ಲಿ : ಸಿಂದೂರ ಕಾರ್ಯಾಚರಣೆಗೆ ಈಗ ತಡೆ ಕೊಟ್ಟಿದ್ದೇವೆ, ಆದರೆ ಇದನ್ನು ನಿಲ್ಲಿಸಿಲ್ಲ, ಮುಂದಿನ ದಿನಗಳಲ್ಲಿ ಪಾಕ್ ಕಡೆಯಿಂದ ಯಾವುದೇ ಉಗ್ರ ಕೃತ್ಯ ನಡೆದರೂ ಆಪರೇಷನ್ ಸಿಂದೂರದ ಅಡಿಯಲ್ಲೇ ಇದೇ ರೀತಿ ತಕ್ಕ ಉತ್ತರ ಕೊಡುತ್ತೇವೆ. ಜತೆಗೆ ಭಯೋತ್ಪಾದನೆ ಮತ್ತು ವ್ಯಾಪಾರ, ಉಗ್ರವಾದ ಮತ್ತು ಮಾತುಕತೆ ಹಾಗೂ ರಕ್ತ ಮತ್ತು ನೀರು ಒಟ್ಟಿಗೇ ಹರಿಯಲು ಸಾಧ್ಯವೇ ಇಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನೆರೆಯ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆಯನ್ನೇ ನೀಡಿದ್ದಾರೆ.
ಸೋಮವಾರ ರಾತ್ರಿ 8.00 ಗಂಟೆಗೆ ಆರಂಭವಾದ ಪ್ರಧಾನಿ ಮೋದಿ ಅವರ 22 ನಿಮಿಷಗಳ ಭಾಷಣದಲ್ಲಿ ಹೆಜ್ಜೆ ಹೆಜ್ಜೆಗೂ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡುತ್ತಲೇ ಹೋದರು. ಆಪರೇಷನ್ ಸಿಂದೂರ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಪ್ರಧಾನಿ, ಪಹಲ್ಲಾಮ್ ಘಟನೆ ತಮಗೆ ಭಾರೀ ನೋವುಂಟು ಮಾಡಿದ್ದು, ಅಂದು ಕುಂಕುಮ ಕಳೆದುಕೊಂಡ ಮಹಿಳೆಯರಿಗೆ ಈ ‘ಆಪರೇಷನ್ ಸಿಂದೂರದ ಮೂಲಕ ನ್ಯಾಯ ಒದಗಿಸಲಾಗಿದೆ ಎಂದರು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಪಾಕಿಸ್ತಾನ ಪ್ರಾಯೋಜಕತ್ವದಲ್ಲಿ ನಡೆಯುವ ಪ್ರತಿಯೊಂದು ಭಯೋತ್ಪಾದನಾ ಕೃತ್ಯಕ್ಕೂ ನಾವು ಇದೇ ರೀತಿಯ ಉತ್ತರ ಕೊಡುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಘೋಷಿಸಿದರು. ಅಷ್ಟೇ ಅಲ್ಲ, ಅಣ್ಣಸ್ತ್ರದ ಹೆಸರೇಳಿಕೊಂಡು ಪಾಕಿಸ್ತಾನ ಯಾರಿಗೂ ಬ್ಲ್ಯಾಕ್ಮೇಲ್ ಮಾಡಲು ಸಾಧ್ಯವೂ ಇಲ್ಲ ಎಂದರು

