ನವದೆಹಲಿ : ಪಹಲ್ಗಾಮ್ ದಾಳಿ ಹಿನ್ನೆಲೆ ಭಾರತ ಕೈಗೊಂಡ ರಾಜತಾಂತ್ರಿಕ ಮತ್ತು ಇತರೆ ವ್ಯೂಹಾತ್ಮಕ ದಾಳಿಗಳಿಂದ ತತ್ತರಿಸಿ ರಣೋತ್ಸಾಹ ತೋರಿಸಿದ ಪಾಕಿಸ್ತಾನಕ್ಕೆ ಭಾರತ ಯುದ್ಧಕ್ಕೆ ನಾವು ರೆಡಿ ಎಂಬ ಪ್ರತ್ಯುತ್ತರ ರವಾನಿಸಿದೆ. ಭಾರತೀಯ ನೌಕಾಪಡೆಯು ಭಾನುವಾರ ದೇಶದ ಕರಾವಳಿ ತೀರದಲ್ಲಿ ಶತ್ರುಗಳ ಯುದ್ಧನೌಕೆಗಳನ್ನು ನಾಶ ಪಡಿಸುವ ಹಲವು ಕ್ಷಿಪಣಿಗಳ ಪರೀಕ್ಷೆ ನಡೆಸಿ ಪಾಕಿಸ್ತಾನಕ್ಕೆ ಯುದ್ಧ ಸನ್ನದ್ಧತೆಯ ಎಚ್ಚರಿಕೆ ರವಾನಿಸಿದೆ.
ಈ ಬಗ್ಗೆ ನೌಕಾಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದು ದೂರದಲ್ಲಿರುವ ಗುರಿಯ ಮೇಲೆ ನಿಖರವಾಗಿ ಆಕ್ರಮಣ ಮಾಡುವ ಸಲುವಾಗಿ ವೇದಿಕೆ, ವ್ಯವಸ್ಥೆ ಮತ್ತು ಸಿಬ್ಬಂದಿಯ ಸನ್ನದ್ಧತೆಯನ್ನು ಮರುಮೌಲ್ಯ ಮಾಪನ ಮಾಡಲು ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಹಲವು ಹಡಗು ವಿರೋಧಿ ಗುಂಡಿನ ದಾಳಿಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು. ಯಾವುದೇ ಸಮಯ, ಸಂದರ್ಭ, ಪ್ರದೇಶದಲ್ಲಿ ದೇಶದ ಕಡಲ ಹಿತಾಸಕ್ತಿಗಳನ್ನು ಕಾಪಾಡಲು ಭಾರತೀಯ ನೌಕಾಪಡೆ ಯುದ್ಧಕ್ಕೆ ಸದಾ ಸಿದ್ಧವಾಗಿದೆ’ ಎಂದು ತಿಳಿಸಿದ್ದಾರೆ.
3 ದಿನದ ಹಿಂದೆ ಕೂಡಾ ಭಾರತೀಯ ನೌಕಾಪಡೆ ಇಂಥದ್ದೇ ಕ್ಷಿಪಣಿ ಪರೀಕ್ಷೆ ನಡೆಸಿ, ಭಾರತೀಯ ವಾಯುಪಡೆ ಯುದ್ಧ ವಿಮಾನಗಳ ಹಾರಾಟದ ಮೂಲಕ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ್ದವು.

