ಹೊಸದಿಲ್ಲಿ : ಭಾರತದಾದ್ಯಂತ ಜಲ ಸಂರಕ್ಷಣಾ ಯೋಜನೆಗಳು ಜಾರಿಯಾಗುತ್ತಿವೆ. ನೀರನ್ನು ಉಳಿಸುವುದು ಕೇವಲ ಸರ್ಕಾರದ ಕೆಲಸವಲ್ಲ. ಭವಿಷ್ಯದ ಪೀಳಿಗೆಗೆ ಸಂಪನ್ಮೂಲಗಳನ್ನು ಉಳಿಸುವುದು ಇಡೀ ಸಮಾಜದ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರೇಡಿಯೋ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ ಭಾಷಣದ 120ನೇ ಆವೃತ್ತಿಯಲ್ಲಿ ಪ್ರಧಾನಿ, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಜಲ ಸಂರಕ್ಷಣೆಯಲ್ಲಿ ಸಾಮೂಹಿಕ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದರು. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ಕ್ಯಾಚ್ ದಿ ರೈನ್ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅವರು ಜನರಿಗೆ ಕರೆ ನೀಡಿದರು.
ಸಾವಿರಾರು ಕೃತಕ ಕೊಳಗಳು, ಅಣೆಕಟ್ಟು ಗಳು, ಕೊಳವೆ ಬಾವಿಗಳ ಪುನರ್ಭರ್ತಿ ಮತ್ತು ಇಂಗು ಗುಂಡಿಗಳನ್ನು ದೇಶದೆಲ್ಲೆಡೆ ನಿರ್ಮಿಸಲಾಗಿದೆ. ಕಳೆದ 7-8 ವರ್ಷಗಳಲ್ಲಿ, ಹೊಸದಾಗಿ ನಿರ್ಮಿಸಲಾದ ಟ್ಯಾಂಕ್ಗಳು, ಕೊಳಗಳು ಮತ್ತು ಇತರ ನೀರಿನ ಮರುಪೂರಣ ರಚನೆಗಳ ಮೂಲಕ 11 ಬಿಲಿಯನ್ ಕ್ಯೂಬಿಕ್ ಮೀಟರ್ಗೂ ಹೆಚ್ಚು ನೀರನ್ನು ಸಂರಕ್ಷಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಭಾಕ್ರಾನಂಗಲ್ ಅಣೆಕಟ್ಟಿನಿಂದ ನಿರ್ಮಾಣವಾಗಿರುವ ಗೋವಿಂದ್ ಸಾಗರ್ ಸರೋವರವನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು. ಇದೇ ವೇಳೆ ಪ್ರಧಾನಿ, ಮಳೆನೀರು ಸಂರಕ್ಷಣೆ ಗರಿಷ್ಠಗೊಳಿಸಲು ಮಳೆ ನೀರು ಕೊಯ್ದು ಮಾದರಿಗಳನ್ನು (ಆರ್ಡಬ್ಲ್ಯೂಎಚ್ಎಸ್) ರಚಿಸಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.

