173
ಲಖನೌ : 2040ರ ವೇಳೆಗೆ ಭಾರತದ ಯೋಜಿತ ಚಂದ್ರನ ಕಾರ್ಯಾಚರಣೆಗೆ ಸಿದ್ದವಾಗಿರಲು ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ, ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸಲಹೆ ನೀಡಿದರು. ಬಾಹ್ಯಾಕಾಶ ಯಾನಗಳಿಗೆ ಇದು ಸುವರ್ಣ ಕಾಲವಾಗಿದ್ದು, ಮೂನ್ ಮಿಷನ್ಗೆ ನಾನು ಸ್ಪರ್ಧೆಯಲ್ಲಿದ್ದೇನೆ. ಕಷ್ಟಪಟ್ಟು ಕೆಲಸ ಮಾಡಿ, ಯಾರು ಚಂದ್ರನ ಬಳಿಗೆ ಹೋಗುತ್ತಾರೆ ಎಂಬುದನ್ನು ನೋಡೋಣ ಎಂದು ನಗೆಗಡಲಲ್ಲಿ ಮಕ್ಕಳನ್ನು ತೇಲಿಸಿದರು.
ಆಕ್ಸಿಯಮ್-4 ಕಾರ್ಯಾಚರಣೆಯ ನಂತರ ತಮ್ಮ ಊರಿಗೆ ಮರಳಿದ ಶುಕ್ಲಾ, ಸಿಟಿ ಮಾಂಟೆಸರಿ ಶಾಲೆಯ (ಸಿಎಂಎಸ್) ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಬಾಹ್ಯಾಕಾಶ ಪರಿಶೋಧನೆಯ ಭವಿಷ್ಯ ಉಜ್ವಲವಾಗಿದೆ ಎಂದ ಅವರು, ಐದು ವರ್ಷಗಳ ತರಬೇತಿ ಮತ್ತು ಅವರ ಐಎಸ್ಎಸ್ ಮಿಷನ್ನ ಒಳನೋಟಗಳನ್ನು ಹಂಚಿಕೊಂಡರು. ಪರಿಶ್ರಮವೇ ಯಶಸ್ಸಿನ ಕೀಲಿಯೆಂದು ಒತ್ತಿಹೇಳಿದ ಶುಕ್ಲಾ, ವಿದ್ಯಾರ್ಥಿಗಳ ಉತ್ಸಾಹ ಮತ್ತು ಪ್ರತಿಭೆಯನ್ನು ಶ್ಲಾಘಿಸಿದರು.

