ಹೊಸದಿಲ್ಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಿ ಇತಿಹಾಸ ಸೃಷ್ಟಿಸಿರುವ ಭಾರತದ ಮೊದಲ ಗಗನಯಾತ್ರಿ ಶುಭಾಂಶು ಶುಕ್ಲಾ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಲಿಂಕ್ ಮೂಲಕ ಮಾತನಾಡಿದ್ದು, ಬಾಹ್ಯಾಕಾಶದಿಂದ ಭಾರತ ನಿಜಕ್ಕೂ ಬೃಹದಾಕಾರದಲ್ಲಿ ಭವ್ಯವಾಗಿ ಕಾಣಿಸುತ್ತದೆ ಎಂದು ರೋಮಾಂಚಕಾರಿ ಅನುಭವ ಹಂಚಿಕೊಂಡಿದ್ದಾರೆ.
ನೀವಿಂದು ನಮ್ಮ ತಾಯ್ಯಾಡಿಂದ ದೂರವಿದ್ದೀರಿ, ಆದರೂ, ನೀವು ಭಾರತೀಯರ ಹೃದಯಗಳ ಸನಿಹದಲ್ಲಿಯೇ ಇರುವಿರಿ. ನಿಮ್ಮ ಹೆಸರಿನಲ್ಲಿಯೂ ಶುಭವಿದ್ದು, ನಿಮ್ಮ ಯಾತ್ರೆಯೂ ಹೊಸ ಯುಗದ ಶುಭಾರಂಭವಾಗಲಿ ಎಂದು ಪ್ರಧಾನಿ ಮೋದಿ ಶುಕ್ಲಾ ಅವರಿಗೆ ಶುಭ ಹಾರೈಸಿದರು.
ಪ್ರಧಾನಿಯೊಂದಿಗೆ ಮಾತನಾಡುತ್ತಾ ಶುಕ್ಲಾ, ಮ್ಯಾಪ್ ಗಳಲ್ಲಿ ನಾವು ನೋಡುವುದಕ್ಕಿಂತ ಅಂತರಿಕ್ಷದಿಂದ ಭಾರತ ಬೃಹದಾಕಾರದಲ್ಲಿ ಕಾಣಿಸುತ್ತದೆ. ಭೂಮಿ ಮೂಡಿಸುವ ನಾವೆಲ್ಲರೂ ಒಂದೇ ಎಂಬ ಭಾವನೆ, ಭಾರತದ ವಿವಿಧತೆಯಲ್ಲಿ ಏಕತೆ ಎಂಬ ಧೈಯವಾಕ್ಯದ ಸಾರ ಅಂತರಿಕ್ಷದಿಂದ ನೋಡುವಾಗ ಅಕ್ಷರಶಃ ನಿಜವೆನಿಸುತ್ತದೆ ಎಂದರು.
ಬಾಹ್ಯಾಕಾಶದಿಂದ ನೋಡುವಾಗ ರಾಜ್ಯಗಳು ಮತ್ತು ದೇಶಗಳ ನಡುವೆ ಗಡಿಗಳಿಲ್ಲ ವಿಶಾಲ ಮನಸ್ಸಿನಿಂದ ನೋಡಲು ಸಾಧ್ಯವಾಗುತ್ತದೆ ಎಷ್ಟಾದರೂ ನಾವು ಮಾನವೀಯತೆಯ ಭಾಗವಾಗಿದ್ದೇವೆ. ಭೂಮಿ ನಾವೆಲ್ಲರೂ ಪಾಲು ಮಾಡಿಕೊಂಡ ಮನೆ. ನಾವೆಲ್ಲರೂ ಭೂಮಿಗೆ ನಾಗರಿಕರು ಎಂದು ಶುಕ್ಲಾ ಹೇಳಿದ್ದಾರೆ.
ನಿಮ್ಮ ಮತ್ತು 140 ಕೋಟಿ ಭಾರತೀಯರ ಶುಭಹಾರೈಕೆಗಳಿಗೆ ಧನ್ಯವಾದಗಳು ಪ್ರಧಾನಿ ಮೋದಿಯವರೇ. ನಾನು ಇಲ್ಲಿ ಸುರಕ್ಷಿತವಾಗಿದ್ದೇನೆ, ಇದೊಂದು ಹೊಸ ಅನುಭವವಾಗಿದೆ. ಇದು ನನ್ನ ಪ್ರಯಾಣ ಮಾತ್ರವಲ್ಲ, ಇದು ಇಡೀ ದೇಶದ ಪ್ರಯಾಣ. ನಿಮ್ಮ ನಾಯಕತ್ವದಲ್ಲಿ ಕನಸುಗಳನ್ನು ನನಸಾಗಿಸಲು ದೇಶದಲ್ಲಿ ಹಲವು ಅವಕಾಶಗಳು ಸೃಷ್ಟಿಯಾಗಿವೆ. ಭಾರತ ಪ್ರತಿನಿಧಿಸಲು ನಾನು ನಿಜಕ್ಕೂ ಹೆಮ್ಮೆಪಡುತ್ತೇನೆ ಎಂದು ಶುಕ್ಲಾ ಸಂತಸ ವ್ಯಕ್ತಪಡಿಸಿದ್ದಾರೆ.

