ಕುಂದಾಪುರ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ನಿದ್ದೆಗೆಡಿಸಿದ್ದ ಸರಣಿ ಮನೆ ಕಳವು ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಕುಂದಾಪುರ ಉಪವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಜ್ಯ ಮೂಲದ ಓರ್ವ ಪ್ರಮುಖ ಆರೋಪಿಯನ್ನು ಸಿಸಿಟಿವಿ ಹಾಗೂ ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲ ನಿವಾಸಿ ಲಾಲಾಜಿಬಾಯ್ ಬುದಾಬಾಯ್ ಸೊಲಂಕಿ (37) ಎಂದು ಗುರುತಿಸಲಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಕುಂದಾಪುರದ ಸಂಗಮ್ ಜಂಕ್ಷನ್ ಸಮೀಪದ ‘ಜೆಎಂಜೆ ವಿಲ್ಲಾ’ ನಿವಾಸದಲ್ಲಿ ಭೀಕರ ಕಳ್ಳತನ ನಡೆದಿತ್ತು. ಮನೆಯ ಮಾಲೀಕರು ಇಲ್ಲದ ಸಮಯ ಸಾಧಿಸಿ ಮುಂಭಾಗದ ಮುಖ್ಯ ಬಾಗಿಲಿನ ಲಾಕ್ ಮುರಿದು ಒಳನುಗ್ಗಿದ್ದ ಖದೀಮರು, ಬೆಡ್ರೂಂನ ಕಪಾಟಿನಲ್ಲಿದ್ದ ₹10,000 ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿತ್ತು.
ಇದೇ ಅವಧಿಯಲ್ಲಿ ಕಸಬ ಗ್ರಾಮದ ವಿನಯ್ ಆಸ್ಪತ್ರೆಯ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ, ಸುಮಾರು ₹20,000 ಮೌಲ್ಯದ ಹೀರೊ ಹೊಂಡಾ ಮೋಟಾರ್ ಸೈಕಲ್ ಕೂಡ ಕಳುವಾಗಿತ್ತು. ಈ ಸರಣಿ ಕಳ್ಳತನಗಳು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದ್ದವು.

