ಕೋಟ : ನಬಾರ್ಡ್ನ ಡಿಜಿಎಮ್ ಮಾಲಿನಿ ಸುವರ್ಣ ಮತ್ತು ನಬಾರ್ಡ್ ಅಧಿಕಾರಿ ಎಸ್. ಪಿ. ಮಹಾಪಾತ್ರ ಇವರ ನೇತೃತ್ವದ ತಂಡ ಓಡಿಸ್ಸಾ ರಾಜ್ಯದ ವಿವಿಧ ಕೃಷಿಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಸುಮಾರು 20ಸಹಕಾರಿ ಮುಖಂಡರುಗಳು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್ ಇವರು ಸಂಘವು ನಡೆದು ಬಂದ ದಾರಿ, ಸದಸ್ಯತ್ವ, ಸದಸ್ಯರಿಗೆ ಸಂಘದಿAದ ದೊರಕುವ ವಿವಿಧ ಸಾಲಗಳು, ಸ್ವ ಸಹಾಯ ಸಂಘ ರಚನೆ, ಉಳಿತಾಯ ಕ್ರೋಢೀಕರಣ, ಸಾಲ ವಿತರಣೆ ಮತ್ತು ವಸೂಲಾತಿ, ಸಂಘದ ಸ್ವಂತ ಕಟ್ಟಡಗಳು ಮತ್ತು ಗೋದಾಮುಗಳು, ಸಂಘದ ವ್ಯವಹಾರ ಅಭಿವೃದ್ಧಿ, ಸದಸ್ಯರಿಗೆ ನೀಡಲಾಗುತ್ತಿರುವ ಸೇವೆಗಳು ಮತ್ತು ಸವಲತ್ತುಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು.
ಸಂಘದ ಆರ್ಥಿಕ ಅಭಿವೃದ್ಧಿ, ಸಾಲ ನೀಡುವಿಕೆ ಮತ್ತು ವಸೂಲಾತಿ, ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆ ಮತ್ತು ಸಂಘದ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡರು. ಸಂಘದ ವ್ಯವಸ್ಥಿತ ಕಾರ್ಯವೈಖರಿ, ಸೇವಾ ಮನೋಭಾವ ಹಾಗೂ ಕಾರ್ಯತತ್ಪರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಘದ ಸರ್ವತೋಮುಖ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳನ್ನು ಶ್ಲಾಘಿಸಿದರು. ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆ ಮತ್ತು ಮಣೂರು ಶಾಖೆಯ ನೂತನ ಶಾಖಾ ಕಟ್ಟಡ, ಗೋದಾಮು, ವಾಣಿಜ್ಯ ಮತ್ತು ವಸತಿ ಸಂಕೀರ್ಣಕ್ಕೆ ಅವರು ಭೇಟಿ ನೀಡಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಇವರು ಭೇಟಿ ನೀಡಿದ ಅಧಿಕಾರಿಗಳನ್ನು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು

