Home » ಶಾಲೆಯ ಶುಭಾರಂಭ ಮತ್ತು ಚಿಣ್ಣರ ಬೇಸಿಗೆ ಶಿಬಿರ
 

ಶಾಲೆಯ ಶುಭಾರಂಭ ಮತ್ತು ಚಿಣ್ಣರ ಬೇಸಿಗೆ ಶಿಬಿರ

by Kundapur Xpress
Spread the love

ಕುಂದಾಪುರ : ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ (ಶುಭದಾ ಆಂಗ್ಲ ಮಾಧ್ಯಮ ಶಾಲೆ) ಸಮರ್ಪಣಾ ಟ್ರಸ್ಟ್ ಹೆಮ್ಮಾಡಿ ನೂತನ ಆಡಳಿತ ಮಂಡಳಿಯೊಂದಿಗೆ ಶಾಲೆಯ ಶುಭಾರಂಭ ಮತ್ತು ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಶುಭದಾ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಅದ್ದೂರಿಯಾಗಿ ಸೋಮವಾರ ನಡೆಯಿತು.
ನಿವೃತ್ತ ಪ್ರಾಧ್ಯಾಪಕರಾದ ಎಸ್.ಜನಾರ್ದನ ಮರವಂತೆ ಅವರು ಒಳಂಗಾಣ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿ,ಹೊಸ ವಿನ್ಯಾಸದೊಂದಿಗೆ ಆರಂಭಗೊಂಡಿರುವ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ನೋಡಬಹುದಾಗಿದೆ.ಕಳೆದ ಎರಡು ವರ್ಷಗಳ ಹಿಂದೆ ಆರಂಭ ಗೊಂಡಿರುವ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಚಟುವಟಿಕೆಯನ್ನು ಗಮನಿಸಿದಾಗ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ಹೇಳಿದರು.ಗಣೇಶ ಮೊಗವೀರರ ತಂಡ ದಿನದಿಂದ ದಿನಕ್ಕೆ ಉನ್ನತೀಕರಣಗೊಳ್ಳುತ್ತಿದೆ,ಗುಣಮಟ್ಟದ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಅಭೂತಪೂರ್ವವಾದ ಅವಕಾಶ ದೊರೆತ್ತಿರುವುದು ಒಳ್ಳೆ ಬೆಳವಣಿಗೆ ಎಂದು ಹೇಳಿದರು.ಉತ್ತಮವಾದ ಗ್ರಂಥಾಲಯವಿದೆ ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಅವರು ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ,ಬೈಂದೂರು ಭಾಗದಲ್ಲಿ ಹೊಸ ಬೆಳವಣಿಗೆ ಆರಂಭಗೊಂಡಿರುವುದು ಬಹಳಷ್ಟು ಸಂತೋಷ ಕರವಾದ ವಿಷಯವಾಗಿದೆ.ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಗಣೇಶ ಮೊಗವೀರ ಅವರ ಆಲೋಚನೆಗಳು ಫಲ ನೀಡಲಿದೆ ಎಂದರು.
ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಶಿಕ್ಷಣ ಮಾರ್ಗದರ್ಶಿ ಚಿತ್ರಾ ಕಾರಂತ ಅವರು ಕಿಂಡರ್ ಗಾರ್ಟನ್ ತರಗತಿ ಕೋಣೆಯನ್ನು ಮಾತನಾಡಿ,ಪ್ರಯತ್ನ ಮತ್ತು ಫಲಿತಾಂಶದಿಂದ ಗುರಿಯನ್ನು ಸಾಧಿಸಬಹುದಾಗಿದೆ.ವಿದ್ಯಾರ್ಥಿಗಳಿಗೆ ಅಭಿನಂದನೆ ಕ್ಕಿಂತ ಪ್ರೋತ್ಸಾಹ ಎನ್ನುವುದು ಅತಿ ಮುಖ್ಯವಾದ ಅಂಶ ಎಂದು ಅಭಿಪ್ರಾಯ ಪಟ್ಟರು.
ಡ್ರಾಮಾ ಜ್ಯೂನಿಯರ್ ಸಿಂಚನ ಕೋಟೇಶ್ವರ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಪ್ರತಿಭೆಯನ್ನು ಮುಚ್ಚಿಟ್ಟರೆ ಕೊಳೆತು ಹೋಗುತ್ತದೆ,ಬಿಚ್ಚಿಟ್ಟರೆ ಬೆಳೆಯುತ್ತದೆ ಆ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹೊಮ್ಮಬೇಕಾದರೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿಕೊಡುವುದು ಬಹಳ ಮುಖ್ಯವಾದ ಅಂಶವಾಗಿದೆ ಎಂದರು.ನಮ್ಮೊಳಗಿನ ಪ್ರತಿಭೆಯನ್ನು ತಿದ್ದಿತಿಡಲು ಹೆತ್ತವರು ಮತ್ತು ಗುರುಗಳ ಪಾತ್ರ ಪ್ರಮುಖವಾಗಿದೆ ಎಂದರು.ಬೇಸಿಗೆ ಶಿಬಿರದಿಂದ ಎಲ್ಲರಿಗೂ ಒಳಿತಾಗಲಿ ಎಂದು ಶುಭಾಹಾರೈಸಿದರು. ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ (ಶುಭದಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಅವರು ಮಾತನಾಡಿ,ಶುಭದಾ ಆಂಗ್ಲ ಮಾಧ್ಯಮ ಶಾಲೆ ಈಗ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಎನ್ನುವ ಹೆಸರಿನೊಂದಿಗೆ ಆರಂಭಗೊಂಡಿದೆ.ಗುಣಮಟ್ಟದ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಲು ಮುಂದೆ ಬರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು ಮತ್ತು ಪ್ರಿನ್ಸಿಪಾಲ್ ಗಣೇಶ ಮೊಗವೀರ ಮಾತನಾಡಿ,ಬಾಲ್ಯದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ನನಗೆ ಯಾರು ಮಾರ್ಗದರ್ಶಕರು ಇರಲಿಲ್ಲ.ಓದ ಬೇಕು ಎನ್ನುವ ತುಡಿತ ನನ್ನಲ್ಲಿ ಇದ್ದಿತ್ತು.ಕಳವಳದಿಂದಲೆ ಶಿಕ್ಷಣವನ್ನು ಆರಂಭಿಸಿದ ನನಗೆ ಶಿಕ್ಷಣ ಸಂಸ್ಥೆಯನ್ನು ಕಟ್ಟಬೇಕು ಎನ್ನುವ ಕನಸು ಇತ್ತು ಎಂದರು.ಅದು ಸಾಕಾರಗೊಂಡಂತಹ ಸಂಧರ್ಭದಲ್ಲಿ ನಾನಿದ್ದೇನೆ.ಮುಂದುವರೆಸಿಕೊಂಡು ಹೋಗುವಂತಹ ಗುರುತರವಾದ ಜವಾಬ್ದಾರಿ ನನ್ನ ಮೇಲೆ ಇದೆ ಎಂದು ಹೇಳಿದರು.ಜನತಾ ಸ್ವಂತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ ಏಳಿಗೆಗೆ ಭೋಧಕ ಮತ್ತು ಬೋದಕೇತರ ಸಿಬ್ಬಂದಿಗಳ ಕೊಡುಗೆ ಅಪಾರವಾದದ್ದು ಎಂದು ಸ್ಮರಿಸಿದರು.ಒಂದು ಶಿಕ್ಷಣ ಸಂಸ್ಥೆ ಸಾಧನೆಯ ಹಾದಿಯಲ್ಲಿ ಸಾಕಾಗಬೇಕಾದರೆ ಪರಿಶ್ರಮ ಎನ್ನುವುದು ನಿರಂತರವಾಗಿ ಉಳಿಸಿಕೊಂಡು ಹೋಗಬೇಕಾಗುತ್ತದೆ.ಜೀವನದಲ್ಲಿ ಪ್ರಯತ್ನ ಅತಿಮುಖ್ಯವಾಗಿದೆ ಎಂದರು.
ಜಗದೀಶ ಪೂಜಾರಿ ಹಕ್ಕಾಡಿ ಅವರು ಅಬ್ದುಲ್ ಕಲಾಂ ವಿಜ್ಞಾನ ಪ್ರಯೋಗಾಲವನ್ನು ಉದ್ಘಾಟಿಸಿದರು.ಪುಂಡಲೀಕ ನಾಯಕ್ ಲೈಬ್ರೆರಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಅಧ್ಯಕ್ಷ ರಾಘವೇಂದ್ರ ಕುಲಾಲ್,ಗೋವಾ ಉದ್ಯಮಿ ಸತೀಶ ಪೂಜಾರಿ ಮರವಂತೆ,ಇಸಿಒ ಸತ್ಯಾನ ಕೊಡೇರಿ,ಸಿರಾಜ್ ಉಪಸ್ಥಿತರಿದ್ದರು.ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಅಲಕಾ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು.ಅತಿಥಿಗಳನ್ನು ಗೌರವಿಸಲಾಯಿತು.ಶಾಲೆಯ ಮುಖ್ಯ ಶಿಕ್ಷಕಿ ದೀಪಿಕಾ ಸ್ವಾಗತಿಸಿದರು.ಜನತಾ ಕಾಲೇಜಿನ ಉಪನ್ಯಾಸಕ ಉದಯ್ ನಾಯ್ಕ್ ರೂಪಿಸಿದರು.ರಾಘವೇಂದ್ರ ವಂದಿಸಿದರು.ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.5 ದಿನಗಳ ಕಾಲ ಚಿಣ್ಣರ ಬೇಸಿಗೆ ಶಿಬಿರ ನಡೆಯಲಿದೆ.

   

Related Articles

error: Content is protected !!