ಹೊಸದಿಲ್ಲಿ: ಭಾರತೀಯ ಅಧಿಕಾರಿಗಳು, ನೀತಿ ನಿರೂಪಕರು ಓಬಿರಾಯನ ರೀತಿಯ ಕೆಲಸ ಬಿಟ್ಟು ಮುಂದಿನ 1000 ವರ್ಷಗಳ ಭವಿಷ್ಯ ರೂಪಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ. ಪ್ರತಿಯೊಬ್ಬರೂ ಈ ಚಿಂತನೆಯನ್ನು ಮನಗಂಡು ಗುರಿ ಸಾಧನೆಯತ್ತ ಅವಿರತ ಕರ್ತವ್ಯ ನಿರತರಾಗಬೇಕಿದೆ. ತಮ್ಮ ಸರಕಾರವು ಇಂತಹ ಪರಿವರ್ತ ನೆಯಲ್ಲಿ ಎದುರಾಗುವ ಒತ್ತಡ ತಂತ್ರಗಳು, ಅಡಚಣೆಗಳಿಗೆ ಮಣಿಯದೆ ದೇಶದ ಭವಿಷ್ಯಕ್ಕಾಗಿ ಕೆಲಸ ಮಾಡಲಿದ್ದೇವೆ ಎಂದು ಅವರು ಸಾರಿ ಹೇಳಿದರು.
ಈ ಹಿಂದೆ ಅಧಿಕಾರಶಾಹಿಯ ಪಾತ್ರವು ಕೈಗಾರಿಕೀಕರಣ ಮತ್ತು ಉದ್ಯಮಶೀಲತೆಯನ್ನು ನಿಯಂತ್ರಿಸುವ ರೀತಿಯಲ್ಲಿ ಇದ್ದುದನ್ನು ಉಲ್ಲೇಖಿಸಿದ ಅವರು, ಈ ಮಾನಸಿಕತೆಯಿಂದಾಚೆಗೆ ಯೋಚಿಸಿ ಕಾರ್ಯ ನಿರ್ವಹಿಸಬೇಕಾದ ದಿನಗಳು ಬಂದಿದೆ. ಇದೀಗ ಇಂತಹ ವಾತಾವರಣವೊಂದು ರೂಪಿತವಾಗುತ್ತಿದ್ದು, ದೇಶವಾಸಿಗಳಲ್ಲಿ ಇಂತಹ ಉದ್ಯಮಶೀಲತೆಯನ್ನು ಪ್ರೇರೇಪಿಸುತ್ತಿದ್ದು, ಎಲ್ಲ ಅಡ್ಡಿ ಆತಂಕಗಳನ್ನು ದಾಟಿ ಮುಂದೆ ಸಾಗಲು ನೆರವಾಗಿದೆ ಎಂದು ಅವರು ನುಡಿದರು. ಅವರು ನಾಗರಿಕ ಸೇವೆಗಳ ದಿನಾಚರಣೆಯಂದು ಇಲ್ಲಿನ ವಿಜ್ಞಾನಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

