ಉಡುಪಿ : ಇಲ್ಲಿನ ದೊಡ್ಡಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಗುರುವಾರ ಕದಿರು ಕಟ್ಟುವ ಕಾರ್ಯಕ್ರಮದೊಂದಿಗೆ ವೈಭವದ ನವರಾತ್ರಿ ಮಹೋತ್ಸವವು ಶುಭಾರಂಭಗೊಂಡಿತು. ಪ್ರಾತಃಕಾಲ ಮಂಗಳವಾದ್ಯ ಸಹಿತವಾಗಿ ಕದಿರನ್ನು ಬರಮಾಡಿಕೊಂಡು, ಪೂಜೆ ನೆರವೇರಿಸಿ ಸಾನ್ನಿಧ್ಯಕ್ಕೆ ಕದಿರು ಕಟ್ಟಲಾಯಿತು. ನಂತರ ಕ್ಷೇತ್ರದ ವತಿಯಿಂದ ಬಂದ ಭಕ್ತಾದಿಗಳಿಗೆ ಕದಿರನ್ನು ವಿತರಿಸಲಾಯಿತು
ಧಾರ್ಮಿಕ ಕಾರ್ಯಕ್ರಮವಾಗಿ ಆದ್ಯ ಗಣಪತಿಯಾಗ, ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ ಹಾಗೂ ಚಂಡಿಕಾಯಾಗ ಹಾಗೂ ದುರ್ಗಾ ಹೋಮಗಳು ಸಂಪನ್ನಗೊಂಡವು. ಸುನಿಲ್ – ಪುಷ್ಪಾ ಹಾಗೂ ಗೀತಾ – ಮಂದಾರ ಶೆಟ್ಟಿ ದಂಪತಿಯಿಂದ ಚಂಡಿಕಾಯಾಗ, ಶ್ರೀಮತಿ ಮತ್ತು ರಾಜೇಂದ್ರ ಪ್ರಸಾದ್ ದಂಪತಿಯಿಂದ ದುರ್ಗಾ ಹೋಮ ನೆರವೇರಿತು.
ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸನೆ ಕನ್ನಿಕರಾಧನೆ, ಬ್ರಾಹ್ಮಣ ಆರಾಧನೆಗಳು ನೆರವೇರಿತು. ಮಧ್ಯಾಹ್ನ ನೆರವೇರಿದ ಮಹಾ ದುರ್ಗಾ ನಮಸ್ಕಾರ ಪೂಜೆ ಹಾಗೂ ರಂಗಪೂಜೆ ನೆರವೇರಿತು ಅನ್ನಸಂತರ್ಪಣೆಯಲ್ಲಿ ಸಹಸ್ರ ಸಂಖ್ಯೆಗೂ ಮಿಕ್ಕಿದ ಭಕ್ತರುಗಳು ಅನ್ನಪ್ರಸಾದವನ್ನು ಸ್ವೀಕರಿಸಿದರು.
ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಸೃಷ್ಟಿ ಕಲಾ ಕುಟೀರದ ಡಾ. ಮಂಜರಿಚಂದ್ರ, ಪುಷ್ಪರಾಜ್ ಇವರ ಶಿಷ್ಯ ಶ್ರೇಯ ಆಚಾರ್ಯ, ಸವಿ ಹಾಗೂ ವಿದ್ವಾನ್ ಬನ್ನಂಜೆ ಶ್ರೀಧರ್ ರಾವ್ ಅವರ ಶಿಷ್ಯ ನಿಶ್ಚಿತ ಅವರು ನೃತ್ಯಸೇವೆ ಸಮರ್ಪಿಸಿದರು. ಡಾ. ಶ್ರೀಧರ್ಭಟ್ ಗುಂಡಿಬೈಲು ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿತು.
ಕ್ಷೇತ್ರದಲ್ಲಿ ನಿರಂತರವಾಗಿ 10 ದಿನಗಳ ಕಾಲ ನೆರವೇರಲಿರುವ ಮೃಷ್ಟಾನ್ನ ಸಂತರ್ಪಣೆಗೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೆರೆದ ಭಕ್ತರಿಗೆ ಬಡಿಸುವ ಮೂಲಕ ಚಾಲನೆ ನೀಡಿದರು.
ಶಾಂತ-ಸುರೇಶ್ ದಂಪತಿಯಿಂದ ಮಹಾ ದುರ್ಗಾ ನಮಸ್ಕಾರ ಪೂಜೆ ಹಾಗೂ ರಂಗಪೂಜೆ ನೆರವೇರಿತು ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದವು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.

