ಕುಂದಾಪುರ : ವಿದ್ಯಾರ್ಥಿಗಳು ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಆಮುಖೇನ ಸಮಾಜ ಸೇವೆಗೆ ಮುಂದಾಗಬೇಕು. ಸೇವೆಗೆ ಅಗತ್ಯವಿರುವುದು ಒಳ್ಳೆಯ ಮನಸ್ಸೇ ಹೊರತು ಹಣವಲ್ಲ. ಹಣವಿಲ್ಲದೆ ಸಹಾಯ ಮಾಡುವುದೇ ಜೀವನದ ಮೌಲ್ಯ ಎಂದು ಆರ್. ಎನ್. ಶೆಟ್ಟಿ ಪದವಿ-ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ. ಬಿ. ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಜೀವನ ಮೌಲ್ಯ ಉಪನ್ಯಾಸ ಮಾಲಿಕೆ 10ರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಇದೇ ಸಂದರ್ಭ ಅವರು ವಿದ್ಯಾರ್ಥಿಗಳಿಗೆ ಮಾನವೀಯತೆ, ಸಮಯಪ್ರಜ್ಞೆ, ಪ್ರಾಮಾಣಿಕತೆ ಮುಂತಾದ ಗುಣ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಜೀವನ ಮೌಲ್ಯ ಉಪನ್ಯಾಸ ಮಾಲಿಕೆಗಳು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕ ಮೌಲ್ಯವನ್ನು ತಿಳಿಸುವ ಪ್ರಯತ್ನವಾಗಿದೆ ಎಂದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ತ್ರಿಷಾ ಸ್ವಾಗತಿಸಿ, ನಿಶಾ ವಂದಿಸಿ, ಮಾನ್ಯ ಪ್ರಾರ್ಥಿಸಿ, ಸಾಕ್ಷಿ ಅತಿಥಿಗಳನ್ನು ಪರಿಚಯಿಸಿ, ರಮಿತಾ ನಿರೂಪಿಸಿದರು.

