182
ಪಹಲ್ಗಾಮ್ : ಇಲ್ಲಿನ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ಉಗ್ರರಿಂದ ಭೀಕರ ನರಮೇಧ ನಡೆದ ಬೆನ್ನಲ್ಲೇ ಜಮ್ಮು ಕಾಶ್ಮೀರಕ್ಕೆ ದೌಡಾಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಖುದ್ದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ತಮ್ಮ ಎದುರು ನ್ಯಾಯಕ್ಕಾಗಿ ರೋದಿಸಿದ ಸಂತ್ರಸ್ತರನ್ನು ಸಂತೈಸಿ, ಭಾರತ ಭಯೋತ್ಪಾದನೆಯ ಎದುರು ಬಾಗುವುದಿಲ್ಲ ಎಂದು ಗುಡುಗಿದ್ದಾರೆ
ಉಗ್ರರ ಗುಂಡಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಬಳಿಕ ಸಂತ್ರಸ್ತರ ಕುಟುಂಬದವರನ್ನು ಭೇಟಿಯಾದರು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನಲ್ಲಿ ಕಂಬನಿಗರೆದು ಗೋಳಾಡುತ್ತಿದ್ದವರ ದುಃಖಕ್ಕೆ ಮಿಡಿದ ಸಚಿವರು ಮಕ್ಕಳ ತಲೆ ಸವರಿ ಧೈರ್ಯ ತುಂಬಿದರು. ನೆರವಿನ ನಿರೀಕ್ಷೆಯಲ್ಲಿ ತಮ್ಮೆದುರು ಕೈಮುಗಿದ ವೃದ್ಧರಿಗೆ ಅಭಯ ನೀಡಿದರು. ಇದೇ ವೇಳೆ, ‘ದಾಳಿಯ ಹಿಂದಿರುವ ಉಗ್ರರನ್ನು ನಾವು ಸುಮ್ಮನೆ ಬಿಡಲ್ಲ. ಭದ್ರತಾ ಪಡೆಗಳು ಅಪರಾಧಿಗಳಿಗೆ ತಕ್ಕ ಪಾಠ ಕಲಿಸಿ, ನ್ಯಾಯ ಒದಗಿಸುತ್ತಾರೆ’ ಎಂದರು.

