ಜೈಪುರ : ಭಾರತದ ಪ್ರಜೆಗಳು, ದೇಶದ ಗಡಿಗಳು ಮತ್ತು ರಕ್ಷಣಾ ಪಡೆಗಳಿಗೆ ಯಾರೂ ತೊಂದರೆಯೊಡ್ಡಕೂಡದು. ತೊಂದರೆಯೊಡ್ಡಿದವರು ತೀರಾ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂಬ ಕಠಿಣ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಕ್ರಮಗಳ ಮುಖೇನ ಇಡೀ ಜಗತ್ತಿಗೆ ರವಾನಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದ್ದಾರೆ.
ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಮತ -ಧರ್ಮ ಯಾವುದೆಂದು ಕೇಳಿ ಅಮಾಯಕ 26 ಪ್ರವಾಸಿಗರನ್ನು ಅತ್ಯಂತ ಮೃಗೀಯವಾಗಿ ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ, ಮುಖ್ಯವಾಗಿ ಅಮಾಯಕರ ಸಾವಿಗೆ ನ್ಯಾಯ ನೀಡುವನ್ವಯ ಭಾರತ ಸರಕಾರ ಅಪರೇಷನ್ ಸಿಂದೂರ್ ನಡೆಸಿ, ಪಾಕ್ನಲ್ಲಿದ್ದ ಭಯೋತ್ಪಾದಕ ನೆಲೆಗಳ ಧ್ವಂಸಗೊಳಿಸಿದ ಬಗ್ಗೆ ಉಲ್ಲೇಖಿಸಿದ ಸಚಿವ ಶಾ, ಪ್ರಧಾನಿ ಮೋದಿಯವರು ದೇಶವನ್ನು ಕಾಪಾಡುವ ಬಲುದೊಡ್ಡ ಕರ್ತವ್ಯ ನಿಭಾಯಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಂಗ್ರೆಸ್ ಆಳ್ವಿಕೆಯಿದ್ದಾಗ ದೇಶದಲ್ಲಿ ಭಯೋತ್ಪಾದಕ ದಾಳಿ ತಾಂಡವಿಸುತ್ತಿತ್ತು ಎಂದು ಆರೋಪಿಸಿದರು.
ಉರಿ ಭಯೋತ್ಪಾದಕ ದಾಳಿ ವಿರುದ್ದ ಪ್ರಧಾನಿ ಮೋದಿ ನಿರ್ಣಾಯಕ ನಿರ್ಧಾರ ಕೈಗೊಂಡ ಪರಿಣಾಮ ಸರ್ಜಿಕಲ್ ಸೈಕ್ ನಡೆಯಿತು.
ಪುಲ್ವಾಮಾ ದಾಳಿಗೆ ಪ್ರತಿಯಾಗಿ ವೈಮಾನಿಕ ದಾಳಿ ನಡೆಯಿತು, ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂದೂರ್ ನಡೆಸಿ ಪಾಕ್ ನೊಳಗಿದ್ದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ ಎಂದವರು ಕೇಂದ್ರ ಸರ್ಕಾರದ ಸರಣಿ ದಿಟ್ಟ ಹೆಜ್ಜೆಯನ್ನು ಪ್ರಶಂಸಿಸಿದರು

